ಸಿದ್ದಾಪುರ, ಅ. 24: ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವನ್ನು ಬೀದಿ ನಾಯಿ ಕಚ್ಚಿ ಎಳೆದಾಡಿ ಗಾಯ ಗೊಳಿಸಿದ ಘಟನೆ ಸಿದ್ದಾಪುರದ ಮುಲ್ಲೆತೋಡಿನಲ್ಲಿ ನಡೆದಿದೆ. ಮುಲ್ಲೆತೋಡು ನಿವಾಸಿ ಶಶಿಕುಮಾರ್ ಎಂಬವರ ಪುತ್ರಿ 2 ವರ್ಷ ಪ್ರಾಯದ ಶೋಭ ಎಂಬಾಕೆಯು ಮನೆಯ ಬಳಿ ಆಟವಾಡುತ್ತಿದ್ದ ಸಂದರ್ಭ ಬೀದಿ ನಾಯಿಯೊಂದು ಮಗುವಿನ ಮೇಲೆ ಧಾಳಿ ನಡೆಸಿ, ಎಳೆದಾಡಿದೆ. ಈ ಸಂದರ್ಭ ಸಮೀಪದಲ್ಲಿದ್ದ ನಿವಾಸಿಗಳು ನಾಯಿಯನ್ನು ದೊಣ್ಣೆಯಿಂದ ಹೊಡೆದು, ಬಳಿಕ ಮಗುವನ್ನು ರಕ್ಷಿಸಿದ್ದಾರೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ತೆರಳಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ.

ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಇತ್ತೀಚೆಗೆ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವದರಿಂದ ಬೀದಿ ನಾಯಿಗಳು ಹೆಚ್ಚಾಗಿದೆ ಎಂದು ಎಸ್.ಡಿ.ಪಿ.ಐ. ಅಧ್ಯಕ್ಷ ಶಾಹುಲ್ ಆರೋಪಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ.ಗೆ ಮನವಿ ನೀಡಿದ್ದರೂ, ನಿರ್ಲಕ್ಷ್ಯ ವಹಿಸುತ್ತಿದ್ದು, ಕಸ ವಿಲೇವಾರಿಗೆ ಸೂಕ್ತ ಜಾಗ ಒದಗಿಸದಿದ್ದಲ್ಲಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.

- ವಾಸು