ಕೂಡಿಗೆ, ಅ. 25: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲೆ, ಗ್ರಾಮೀಣ ಕ್ರೀಡೆ, ಆಧುನಿಕ ಕೃಷಿ ಪದ್ಧತಿ, ಕೃಷಿ ವಿಮೆ ಸೇರಿದಂತೆ ಕೃಷಿಗೆ ಸಂಬಂಧಪಟ್ಟ ವಿಚಾರ ವಿನಿಮಯ ಹಾಗೂ ಗ್ರಾಮೀಣ, ಪುರಾತನ ಗೀತೆಗಳಿಗೆ ಸಂಬಂಧಪಟ್ಟಂತೆ ವಿವಿಧ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಕಳೆದ ಬಾರಿ ಶಿರಂಗಾಲದಲ್ಲಿ ಮುಂಗಾರು ಸಂಪದ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಅದರಂತೆ ಈ ಬಾರಿ ಅನ್ನದಾತರಿಗಾಗಿ ನ. 15 ರಂದು ತೊರೆನೂರು ಗ್ರಾಮದಲ್ಲಿ ಒಂದು ದಿನದ ಕೃಷಿ ಸಾಹಿತ್ಯ ಸಮಾವೇಶ ಕಾರ್ಯ ಕ್ರಮವನ್ನು ಆಯೋಜಿಸಲು ತೀರ್ಮಾನಿಸಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದರು.

ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕೃಷಿ ಸಾಹಿತ್ಯ ಸಮಾವೇಶದ ಎರಡನೇ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಸಾಹಿತಿಗಳು ರೈತರ ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಭಾಗದ ಸಂಸ್ಕøತಿಯನ್ನು ನೇರವಾಗಿ ಅಧ್ಯಯನ ನಡೆಸಿ ಸಾಹಿತ್ಯ ರಚಿಸಲು ಅನುಕೂಲವಾಗುವಂತೆ ಮತ್ತು ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕೃಷಿ ಸಾಹಿತ್ಯ ಸಮಾವೇಶದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಸಹ ಆಯೋಜಿಸಿದೆ.

ಅಲ್ಲದೆ, ರೈತರು ಎದುರಿಸುತ್ತಿರುವ ಹಲವಾರು ಸಂಕಷ್ಟಗಳಿಗೆ ಕೃಷಿ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುವದು ಎಂದು ಲೋಕೇಶ್ ಸಾಗರ್ ಹೇಳಿದರು.

ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆಗಳು ನಡೆದವು.

ನಂತರ ಆಹಾರ ಸಮಿತಿ, ಕ್ರೀಡಾ ಸಮಿತಿ, ಅಲಂಕಾರ ಸಮಿತಿ, ವಸ್ತು ಪ್ರದರ್ಶನ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಸಮಿತಿ ಅಧ್ಯಕ್ಷರಿಗೆ ಜವಾಬ್ದಾರಿಯನ್ನು ವಹಿಸಲಾಯಿತು.

ಸಭೆಯಲ್ಲಿ ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್, ಸದಸ್ಯರಾದ ಮಹೇಶ್, ಕಿಶೋರ್ ಕುಮಾರ್, ರೂಪ, ಮಂಗಳ, ನಬಾರ್ಡ್ ಅಧಿಕಾರಿ ಆರ್ಮುಗಂ, ತೊರೆನೂರು ಸಹಕಾರ ಸಂಘದ ನಿರ್ದೇಶಕ ಕೃಷ್ಣೇಗೌಡ, ಹೆಚ್.ಬಿ. ಚಂದ್ರಪ್ಪ, ಜಗದೀಶ್, ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಜಲಾನಯನ ಪ್ರದೇಶದ ಅಧ್ಯಕ್ಷ ಚನ್ನಬಸಪ್ಪ, ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿಕುಮಾರ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟಾಚಲ, ಗ್ರಾಮದ ಪ್ರಮುಖರಾದ ಟಿ.ಕೆ. ದೇವರಾಜ್, ಟಿ.ಆರ್. ಮಂಜೇಶ್, ಚಿಕ್ಕಯ್ಯ, ಶಿವಾನಂದ, ಟಿ.ಡಿ. ಪ್ರಕಾಶ್, ಟಿ.ಕೆ. ಗಣೇಶ್, ಕ.ಸಾ.ಪ. ಜಿಲ್ಲಾ ನಿರ್ದೇಶಕರಾದ ಕೆ.ಕೆ. ನಾಗರಾಜ್ ಶೆಟ್ಟಿ, ಅಶ್ವಥ್ ಕುಮಾರ್ ಸೇರಿದಂತೆ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.