ಮಡಿಕೇರಿ, ಅ. 25: ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನೀಡುವ ‘ರಾಷ್ಟ್ರೀಯ ಮಾನವೀಯತೆ ಪ್ರಶಸ್ತಿ’ಗೆ ಪತ್ರಕರ್ತ, ಹಿರಿಯ ವಾರ್ತಾ ವಾಚಕ ಚೋವಂಡ ಬೋಪಯ್ಯ ಭಾಜನರಾಗಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಮೇಯರ್ ಜಿ. ಪದ್ಮಾವತಿ ಅವರು ಬೋಪಯ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಮಾನವ ಹಕ್ಕುಗಳ ಕುರಿತು ಉತ್ತಮ ಕೆಲಸ ಮಾಡಿದ ವಿವಿಧ ರಾಜ್ಯಗಳ ಕಾರ್ಯಕರ್ತರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ರಾಷ್ಟ್ರಾಧ್ಯಕ್ಷ ಡಾ. ಮೋಹನ್ ರಾಜ್ ನಲವಾಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೀರಾಜಪೇಟೆಯ ಮಗ್ಗುಲ ಗ್ರಾಮದವರಾದ ಚೋವಂಡ ಬೋಪಯ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರು, ವಾರ್ತಾ ವಾಚಕರಾಗಿದ್ದು, ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿದ್ದಾರೆ. ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾಗಿರುವ ಇವರು ರೆಡ್‍ಕ್ರಾಸ್ ಸಂಸ್ಥೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.