ಸುಂಟಿಕೊಪ್ಪ, ಅ. 26: 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯ ಅಪವಿತ್ರ ಮೈತ್ರಿಯಿಂದ ಮುಸ್ಲಿಂ ಮಹಿಳೆಗೆ ಸಿಗಬೇಕಾದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ಸಿಗರೇ ವಂಚಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದವರಿಗೆ ಅಲ್ಪಸಂಖ್ಯಾತರ ಮೇಲಿನ ಮೊಸಳೆ ಕಣ್ಣೀರಿಗೆ ಸಾಕ್ಷಿಯಾಗಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಇಸಾಕ್ ಖಾನ್ ತಿಳಿಸಿದ್ದಾರೆ.

ಇತ್ತೀಚೆಗೆ 7ನೇ ಹೊಸಕೊಟೆ ಗ್ರಾ.ಪಂ. ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅಧ್ಯಕ್ಷರ ಚುನಾವಣೆ ನಡೆಯಿತು. ಈ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 6 ಸದಸ್ಯರುಗಳೆದ್ದಾರೆ. ಬಿಜೆಪಿ ಬೆಂಬಲಿತ 4 ಮಂದಿ ಸದಸ್ಯರುಗಳಿದ್ದಾರೆ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸುಮಲತಾ ಸ್ಪರ್ಧಿಸಿದ್ದರು. ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಹಸೀನ ಸ್ಪರ್ಧಿಸಿದ್ದರು ಹಾಗೂ ಮತ್ತೊಬ್ಬ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಿಂದಿನ ಅಧ್ಯಕ್ಷೆ ಸುಜಾತ ಸ್ಪರ್ಧಿಸಿದ್ದರು. ಮತ ಎಣಿಕೆಯಾದಾಗ ಬಿಜೆಪಿ ಅಭ್ಯರ್ಥಿ ಸುಮಲತಾ 6, ಸುಜಾತ 4 ಹಾಗೂ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಹಸೀನ ಶೂನ್ಯ ಮತ ಪಡೆದರು.

ಕಾಂಗ್ರೆಸ್ ಸದಸ್ಯರುಗಳ ಈ ನಿಗೂಢ ನಡೆ ಜಾತ್ಯತೀತ ನಿಲುವಿನ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಅಧಿಕಾರ ಸ್ಥಾನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದು ಕಾಣಬಹುದಾಗಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.