ಕೂಡಿಗೆ, ಅ. 27: ಬೀಳುವ ಹಂತ ತಲುಪಿರುವ ಮನೆಗಳು, ನೀರಿಲ್ಲದೆ ಒಣಗುತ್ತಿರುವ ನೀರಿನ ಟ್ಯಾಂಕ್‍ಗಳು, ಕಾಡುಮಯ ವಾಗಿರುವ ಮನೆಗಳು, ರಸ್ತೆಯೇ ಇಲ್ಲದೆ ಹೆಣಾಗಾಡುವ ಜನರು ಇಂತಹ ಸಮಸ್ಯೆಗಳ ಸರಮಾಲೆ ಇರುವದು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆ ಹೊಸೂರು ಗ್ರಾಮಕ್ಕೆ ಸಮೀಪವಿರುವ, ಬಾಣಾವರ ಮೀಸಲು ಅರಣ್ಯ ಸೋಮವಾರಪೇಟೆ ಮೀಸಲು ಅರಣ್ಯದ ಕೊನೆಯ ಅಂಚಿನಲ್ಲಿರುವ ಹುಣಸೆಪಾರೆ ಜೇನುಕುರುಬರ ಹಾಡಿಯಲ್ಲಿ.

ಈ ಹಾಡಿಯಲ್ಲಿ 16ಕ್ಕೂ ಅಧಿಕ ಕುಟುಂಬಗಳಿದ್ದು ಬಿಸಿಲಿನ ಧಗೆ ಹೆಚ್ಚಾದಂತೆ ಕುಡಿಯುವ ನೀರಿನ ತಾತ್ವಾರ ಎದುರಾಗಿದೆ. ಈ ಹಾಡಿಯ ಜನರು ದಿನನಿತ್ಯ ಕುಡಿಯುವ ನೀರಿಗಾಗಿ 1 ಕಿ.ಮೀ. ದೂರ ತೆರಳಿ ಕುಡಿಯಲು ಯೋಗ್ಯವಲ್ಲದ ನೀರನ್ನು ತರುವಂತಹ ಪರಿಸ್ಥಿತಿ ಉಂಟಾಗಿದೆ.

ಹಾಡಿಯ ಸಮೀಪದಲ್ಲಿ ಸೋಮವಾರಪೇಟೆಯ ಕಕ್ಕೆಹೊಳೆಯು ಮಳೆಗಾಲದಲ್ಲಿ ತುಂಬಿ ಹರಿಯುವದರಿಂದ ಹಾಡಿಯ ಜನರಿಗೆ ನೀರಿನ ಸೌಲಭ್ಯವಿರುತ್ತದೆ. ಇದೀಗ ಕಕ್ಕೆಹೊಳೆಯಲ್ಲಿ ನೀರಿನ ಹರಿಯುವಿಕೆಯು ಇಲ್ಲದೆ ಇರುವದರಿಂದ ಈ ಹಾಡಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಯವರು ಒದಗಿಸದೇ ಇರುವದರಿಂದ ಒಂದು ಕಿ.ಮೀ. ದೂರದವರೆಗೆ ತೆರಳಿ ಹೊಳೆಯ ದಡದಲ್ಲಿ ಗುಂಡಿಯನ್ನು ತೆಗೆದು ಅಲ್ಲಿ ಸಂಗ್ರಹವಾದ ಹೊಳೆಯ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಕಕ್ಕೆಹೊಳೆಯ ಗುಂಡಿಗಳಲ್ಲಿ ನಿಂತಿರುವ ಕೊಳಕು ನೀರನ್ನೆ ತಂದು ತಮ್ಮ ಹಾಡಿಯಲ್ಲಿ ಬಟ್ಟೆಯಲ್ಲಿ ಸೋಸಿ ಕೊಂಡು ಕುಡಿಯುವ ಪ್ರಸಂಗ ವೊಂದು ಹುಣಪಾರೆ ಜೇನುಕುರುಬರ ಹಾಡಿಯಲ್ಲಿ ಪ್ರತಿದಿನ ಕಾಣಬಹುದಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಕ್ರೀಯಾ ಯೋಜನೆ ತಯಾರಿಸುವ ಸಂದರ್ಭ ಬೋರ್‍ವೆಲ್ ಕೊರೆಯದೆ ಹಳೆ ಬೋರ್‍ವೆಲ್‍ಗೆ ಮೋಟರ್ ಇಳಿಸಿ ನೀರು ಬರದೆ ಮೂರು ವರ್ಷಗಳೇ ಕಳೆದಿವೆ. ಗುತ್ತಿಗೆದಾರರು ಕ್ರೀಯಾ ಯೋಜನೆಯ ಅನುಗುಣವಾಗಿ ಕಾಮಗಾರಿಯನ್ನು ಪೂರೈಸಿರುತ್ತಾರೆ. ಆದರೆ ಹಳೆ ಬೋರ್‍ವೆಲ್‍ಗೆ ಮೋಟಾರ್ ಇಳಿಸುವಿಕೆಯಲ್ಲಿ ತಾಂತ್ರಿಕ ತೊಂದರೆಯುಂಟಾಗಿ ಇದುವರೆಗೂ ಸೌಲಭ್ಯ ದೊರಕಿಲ್ಲ. ಕುಡಿಯುವ ನೀರಿನ ಹೆಸರಿನಲ್ಲಿ ಲಕ್ಷಾಂತರ ರೂಗಳನ್ನು ವ್ಯವಮಾಡುತ್ತಿರುವ ಸಂಬಂಧಪಟ್ಟ ಇಲಾಖೆ ಈ ಹಾಡಿಗೆ ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಿಲ್ಲ ಎಂದು ಹಾಡಿಯ ಪ್ರಮುಖ ರಾದ ಜೇನುಕುರುಬರ ಮುತ್ತಮ್ಮ, ತಿಮ್ಮಪ್ಪ, ರಾಜು, ಕೃಷ್ಣ, ಸಣ್ಣಪ್ಪ, ಗಣೇಶ್, ಬಸವರಾಜು, ಜಯಮ್ಮ, ಸಣ್ಣವ್ವ, ಶ್ವೇತ, ರವಿ, ಶಿವ, ಕಾಳವ್ವ ತಮ್ಮ ಅಳಲನ್ನು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದರು.

ಈ ಹಾಡಿಯಲ್ಲಿರುವ 15 ಕುಟುಂಬಗಳ ಕುಡಿಯುವ ನೀರಿನ ಸ್ಥಿತಿ ಈ ಪರಿಯಾದರೆ ಸ್ನಾನ ಮತ್ತು ಬಟ್ಟೆ ತೊಳೆಯಲು ಕಕ್ಕೆಹೊಳೆಯ ಕಲ್ಲುಗಳ ಮಧ್ಯೆ ನಿಂತಿರುವ ನೀರನ್ನೇ ಅವಲಂಬಿಸಿ ತಮ್ಮ ದಿನನಿತ್ಯ ಬದುಕನ್ನು ಸಾಗಿಸುವಂತಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಈ ಹಾಡಿಯ ಕುಟುಂಬಗಳಿಗೆ ಕೆಲವು ಮನೆಗಳನ್ನು ಒಂದು ವರ್ಷದ ಹಿಂದೆ ನಿರ್ಮಿಸಿದ್ದರು, ಇದೀಗ ಆ ಮನೆಗಳು ಬಿರುಕು ಹಾಗೂ ಬೀಳುವ ಹಂತವನ್ನು ತಲುಪಿವೆ. ಇದಕ್ಕೆ ಸ್ಥಳೀಯ ಹಾಡಿಯ ಮುಖಂಡ ತಿಮ್ಮಪ್ಪ ಮಾತನಾಡಿ, ಮನೆಗಳನ್ನು ಅಧಿಕಾರಿಗಳು ನಿರ್ಮಿಸಿಕೊಡಲು ಗುತ್ತಿಗೆದಾರರಿಗೆ ಸೂಚಿಸಿದರು, ಗುತ್ತಿಗೆದಾರ ನಿರ್ಮಿಸಿರುವ ಕಳಪೆ ಕಾಮಗಾರಿ ಯಿಂದಾಗಿ ಮನೆಯು ಬೀಳು ವಂತಾಗಿದೆ. ನಮಗೆ ಶೌಚಾಲಯ ಹಾಗೂ ಸ್ನಾನದ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಇಲಾಖೆಯಿಂದ ಮಂಜೂರಾಗಿದ್ದರೂ, ಇಲಾಖೆಯವರು ಶೌಚಾಲಯ ನಿರ್ಮಾಣ ಮಾಡಿಲ್ಲ. ಅದರ ಬದಲಾಗಿ ಗ್ರಾಮ ಪಂಚಾಯ್ತಿ ವತಿಯಿಂದ ಶೌಚಾಲಯ ನಿರ್ಮಿಸಿಕೊಡಲಾಗಿದೆ.

ಅಧಿಕಾರಿಗಳು ಬರುವದಿಲ್ಲ ಸ್ವಾಮಿ, ಬಂದರು ಹಾಡಿಯ ಒಳಗೆ ಬರದೆ ರಸ್ತೆಯಲ್ಲೆ ನಿಂತು ಕೈತೋರಿಸಿ ತೆರಳುತ್ತಾರೆ. ಆದರೆ ಸಮಾಜ ಕಲ್ಯಾಣ ಇಲಾಖೆಯವರು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡದೆ ಸ್ಥಳೀಯ ಪಂಚಾಯಿತಿ ಕಡೆ ಕೈತೋರಿಸುತ್ತಿ ರುವದು ಸರಿಯಾದ ಕ್ರಮವಲ್ಲ ಎಂದು ಹಾಡಿಯ ಮುತ್ತಮ್ಮ ತಿಳಿಸಿದ್ದಾರೆ.

ಶೌಚಾಲಯ ನಿರ್ಮಾಣ ವಾದರೂ ಶೌಚಾಲಯಕ್ಕೆ ನೀರಿಲ್ಲ. ನಾವು ಹೆಂಗೆ ಜೀವನ ಮಾಡಕು, ಕುಡಿಯಕ್ಕೆ ನೀರಿಲ್ಲ, ಶೌಚಾಲಯಕ್ಕೆ ನೀರು ಎಲ್ಲಿಂದ...? ಅದಕ್ಕೆ ಶೌಚಾಲಯದ ಬದಲು ಬಯಲು ಪ್ರದೇಶವನ್ನು ಅವಲಂಬಿಸಿದ್ದೇವೆ ಎಂದು ಸಣ್ಣಮ್ಮ ಹೇಳುತ್ತಾರೆ.

ಸರ್ಕಾರ ವಿವಿಧ ಯೋಜನೆಗಳ ಮೂಲಕ ಸರ್ಕಾರದ ಹಣವನ್ನು ವಿನಿಯೋಗಿಸಿ, ಹಾಡಿಯ ಜನರ ಅಭಿವೃದ್ಧಿಯ ಪಡಿಸುತ್ತೇವೆ. ಮೂಲಭೂತ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಹೇಳಿಕೆಗಳನ್ನು ಹೇಳುವ ರಾಜಕಾರಣಿಗಳು, ಜನ ಪ್ರತಿನಿಧಿಗಳು ಇಂತಹ ಹಾಡಿಗಳತ್ತ ಚುನಾವಣೆಯ ಸಂದರ್ಭ ಮತದಾನಕ್ಕೆ ಹಾತೊರೆಯುತ್ತಾರೆ ಆದರೆ, ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ನಿರ್ಲಕ್ಷ್ಯ ಏಕೆ ಎಂದು ಹಾಡಿ ಜನರ ಮಾತು.

ನಮಗೆ ಮತದಾನದ ಹಕ್ಕಿದ್ದರು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಚುನಾವಣೆಯ ಸಂದರ್ಭ ಸಾಮಾನ್ಯ ಪ್ರಜೆಯಾಗಿ ಮತಚಲಾಯಿಸುತ್ತೇವೆ. ಮೂಲಭೂತ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿ, ಪ್ರಮುಖವಾದ ಕುಡಿಯುವ ನೀರು, ಮನೆಗೆ ವಿದ್ಯುತ್ ಒದಗಿಸದೆ ಈ ಹಾಡಿಯನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಹಾಡಿಯ ನಿವಾಸಿ ಗಣೇಶ ತಿಳಿಸಿದ್ದಾರೆ.

ಹಾಡಿಯ ಸಮೀಪದಲ್ಲಿ ಹುದುಗೂರು ಮೀಸಲು ಅರಣ್ಯ ಬಲ ಭಾಗಕ್ಕೆ ಬಾಣಾವರ ಮೀಸಲು ಅರಣ್ಯ ಇದ್ದು, ಅರಣ್ಯಕ್ಕೆ ಸಂಬಂಧಿಸಿದಂತೆ ಎರಡು ಕಡೆಗಳಲ್ಲಿ ಕಂದಕಗಳನ್ನು ತೋಡಿದ್ದರು. ಕಾಡಾನೆಗಳ ನಡುವೆ ಬದುಕು ನಡೆಸುತ್ತಿರುವ ಹುಣಸೆಪಾರೆ ಜೇನುಕುರುಬ ಕುಟುಂಬಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ (ಐಡಿಡಿಪಿ) ಮುಂದಾಗದೆ ಭರವಸೆಗಳನ್ನೆ ನೀಡುತ್ತಾ ನಡೆಯುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹಾಡಿಯ ಜನರ ಅಳಲು. ಈ ವ್ಯಾಪ್ತಿಯು ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದು, ಗ್ರಾಮ ಪಂಚಾಯಿತಿಯಿಂದ ಬೀದಿ ದೀಪಗಳನ್ನು ಅಳವಡಿಸಿದ್ದರು. ಕೆಲವು ದೀಪಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಹಾಡಿ ರಸ್ತೆಯ ಅಂಚಿನಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದ್ದು, ಇದೀಗ ಅಂತರ್ಜಲ ಕುಸಿತದಿಂದ ನೀರು ಸ್ಥಗಿತಗೊಂಡಿದೆ. ಈ ಹಾಡಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾಸಿಕ ಸಭೆಯಲ್ಲಿ ಚರ್ಚಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಐಡಿಡಿಪಿ ವತಿಯಿಂದ ಕುಡಿಯುವ ನೀರಿನ ಯೋಜನೆಗೆ ಪೈಪ್‍ಲೈನ್ ಹಾಗೂ ಸಣ್ಣ ಟ್ಯಾಂಕ್‍ಗಳನ್ನು ನಿರ್ಮಿಸಿ, ಬೋರ್‍ವೆಲ್‍ಗಳನ್ನು ಕೊರೆದು ವರ್ಷಗಳೇ ಕಳೆದರೂ ಇದುವರೆಗೂ ನೀರಿನ ವ್ಯವಸ್ಥೆ ಈ ಹಾಡಿಗೆ ತಲುಪಿಲ್ಲ. ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಸಲು ವಿದ್ಯುತ್ ಸಂಪರ್ಕವನ್ನು ಕಾಯುತ್ತಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ಸಮೀಪದ ರೈತರನ ಬೋರ್‍ವೆಲ್‍ನಿಂದ ಕಳೆದ ಒಂದು ವರ್ಷದಿಂದ ಉಚಿತವಾಗಿ ನೀರು ಒದಗಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಸ್ಥಳೀಯ ರೈತ ಬೋರ್‍ವೆಲ್ ನೀರು ಕೊಡದಿದ್ದರೆ ಹಾಡಿ ಜನರಿಗೆ ಕಕ್ಕೆಹೊಳೆಯ ನೀರೆ ಗತಿ.

ವರ್ಷಂಪ್ರತಿ ಹಾಡಿಯ ಜನರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗಳನ್ನು ಹಮ್ಮಿಕೊಂಡರು ಇನ್ನೂ ಈ ಹಾಡಿಯ ಕೆಲವು ಮಂದಿಗೆ ಮನೆಯ ಭಾಗ್ಯವು ದೊರಕದೆ ಹುಲ್ಲಿನ ಗುಡಿಸಿಲಿನಲ್ಲಿ ತಮ್ಮ ಬದುಕನ್ನು ಸಾಗಿಸುವಂತ ಸನ್ನಿವೇಶ ಇಲ್ಲಿ ಕಾಣಬಹುದಾಗಿದೆ.

ಅಲ್ಲದೆ, ಹಲವು ಮನೆಗಳು ಬೀಳುವ ಹಂತ ತಲುಪಿವೆ. ಇನ್ನು ಕೆಲವು ಮನೆಗಳಲ್ಲಿ ಕಾಡು ಬೆಳೆದಿವೆ. ಮನೆ ಗೋಡೆ ಕುಸಿಯಬಹುದೆಂಬ ಭಯದಿಂದ ಹಾಡಿ ನಿವಾಸಿಗಳು ಮನೆಯ ಹೊರಗೆ ಮಲಗುವ ಪ್ರಸಂಗ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಮೂಲಭೂತ ಸೌಲಭ್ಯಗಳನ್ನು ಈ ಹಾಡಿಗೆ ಒದಗಿಸಬೇಕೆಂದು ಹಾಡಿಯ ನಿವಾಸಿಗಳು ಆಗ್ರಹಿಸಿದ್ದಾರೆ.