ಸಿದ್ದಾಪುರ, ಅ. 29: ಹುಂಡಿಯ ಶಾದಿ ಮಹಲ್ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷವನ್ನು ಸಂಘಟಿಸಬೇಕೆಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್‍ಹಾಜಿ ಕರೆ ನೀಡಿದರು.

ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ಮುಸ್ಲಿಂ ಜಮಾಅತ್ ಸಮಿತಿಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಹರೀಶ್ ಬೋಪಣ್ಣ ಮಾತನಾಡಿ ದೇಶದಲ್ಲಿ ಜಾತ್ಯತೀತ ನಿಲುವು ಇರುವಂತದ್ದು ಕಾಂಗ್ರೆಸ್ ಪಕ್ಷವಾಗಿದ್ದು ಎಲ್ಲರಿಗೂ ಸಮಾನತೆಯನ್ನು ನೀಡುವ ಪಕ್ಷವಾಗಿದೆ ಎಂದು ತಿಳಿಸಿದರು. ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಸಲಾಂ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಅಲ್ಲಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡ ಪಿ.ಸಿ. ಹಸೈನಾರ್‍ಹಾಜಿ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಹರೀಶ್ ಬೋಪಣ್ಣ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಸಲಾಂ ಈ ಮೂವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಲೀಲಾವತಿ, ಮಸೀದಿ ಸಮಿತಿಯ ಅಧ್ಯಕ್ಷ ಮಹಮ್ಮದ್, ಕಾರ್ಯದರ್ಶಿ ಶೇಕ್‍ಅಹ್ಮದ್, ಗ್ರಾ.ಪಂ. ಸದಸ್ಯ ನಿಯಾಸ್, ಮಸೀದಿಯ ಧರ್ಮಗುರು ನೌಷಧ್, ಯೂಸುಫ್, ಬ್ಲಾಕ್ ಉಪಾಧ್ಯಕ್ಷ ಹನೀಫ್, ಜಿ.ಪಂ. ಮಾಜಿ ಸದಸ್ಯ ಹೆಚ್.ಸಿ. ಸಣ್ಣಯ್ಯ, ಇತರರು ಹಾಜರಿದ್ದರು. ಸಿ.ಎ. ಹಂಸ ಸ್ವಾಗತಿಸಿ ವಂದಿಸಿದರು.