ಮಡಿಕೇರಿ, ಅ. 29: ಕೊಡಗು ಕಾವೇರಿ ಕೋಳಿ ಸಾಕಾಣೆದಾರರ ಸಂಘದ ಚುನಾವಣೆಯು ನಿನ್ನೆ ಸಹಕಾರ ಇಲಾಖೆಯ ನರಸಿಂಹಮೂರ್ತಿ ಸಮ್ಮುಖದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ನಂದಿನೆರವಂಡ ಎ. ರವಿ ಬಸಪ್ಪ, ಉಪಾಧ್ಯಕ್ಷರಾಗಿ ಟಿ.ವಿ. ರುಕ್ಮಿಣಿ, ಕಾರ್ಯದರ್ಶಿಯಾಗಿ ಬಿ.ಕೆ. ಬಾಲಕೃಷ್ಣ ರೈ ಆಯ್ಕೆಗೊಂಡಿದ್ದಾರೆ.

ಸಂಘದ ನಿರ್ದೇಶಕರುಗಳಾಗಿ ಕೆ.ಯು. ಗಣೇಶ್, ಕೆ.ಕೆ. ಗಣಪತಿ, ಎಲ್.ಕೆ. ಹರಿನಾಥ ಕುಮಾರ್, ಬಿ.ಎ. ರವಿ, ಎನ್.ಪಿ. ಚಂಗಪ್ಪ, ಅಲ್ಲಾರಂಡ ವಿಠಲ್ ನಂಜಪ್ಪ, ಬಿ.ಪಿ. ಸುಬ್ರಮಣಿ ನೇಮಕಗೊಂಡಿದ್ದಾರೆ. ಮಹಿಳಾ ಕ್ಷೇತ್ರದಿಂದ ಕೂಪದೀರ ಸುಂದರಿ ಮಾಚಯ್ಯ, ಹಿಂದುಳಿದ ಕ್ಷೇತ್ರದಿಂದ ಕೆ.ಯು. ಶಫಿ ಆಯ್ಕೆಗೊಂಡಿದ್ದಾರೆ. ಇನ್ನು ಮೂರು ಮೀಸಲು ಸ್ಥಾನಗಳಿಗೆ ಆಯ್ಕೆ ನಡೆಯಬೇಕಿದ್ದು, ಸಂಘವು 87 ಸದಸ್ಯರನ್ನು ಹೊಂದಿರುವದಾಗಿ ಅಧ್ಯಕ್ಷ ರವಿ ಬಸಪ್ಪ ತಿಳಿಸಿದ್ದಾರೆ.

ಅಲ್ಲದೆ ಕರ್ನಾಟಕ ರಾಜ್ಯ ಸಹಕಾರ ಕುಕ್ಕುಟ ಮಂಡಳಿಯಿಂದ ರೂ. 5 ಲಕ್ಷ ಅನುದಾನಕ್ಕೆ ಮನವಿ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಸಂಘದಿಂದ ಸುಸಜ್ಜಿತ ಕೋಳಿ ಮಾರುಕಟ್ಟೆ, ಗ್ರಾಹಕರಿಗೆ ಉತ್ತಮ ಮಾಂಸದೊಂದಿಗೆ ರೈತರಿಗೆ ಕೋಳಿ ಸಾಕಾಣಿಕೆಗೆ ಪ್ರೋತ್ಸಾಹಿಸಿ ಸಂಘವನ್ನು ಬಲಿಷ್ಠಗೊಳಿಸಲಾಗುವದು ಎಂದು ಅವರು ತಿಳಿಸಿದ್ದಾರೆ.