ಕುಶಾಲನಗರ, ಅ. 29: ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಇಲ್ಲಿನ ಕಾರು ನಿಲ್ದಾಣದಲ್ಲಿರುವ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆ ಭಾನುವಾರ 15 ದಿನ ಪೂರೈಸಿತು. ವಕ್ರ್ಸ್‍ಶಾಪ್ ಮಾಲೀಕರು ಮತ್ತು ನೌಕರರ ಸಂಘ, ಕಾವೇರಿ ಲಾರಿ ಮಾಲೀಕರ ಸಂಘ ಹಾಗೂ ಮಿನಿಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಮಿನಿಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ದೊಡ್ಡಣ್ಣ, ಕಾವೇರಿ ತಾಲೂಕು ರಚನೆಗೆ ಗ್ರಾಮಾಂತರ ಪ್ರದೇಶಗಳಲ್ಲೂ ಭಾರೀ ಬೆಂಬಲ ವ್ಯಕ್ತವಾಗುತ್ತಿರುವದು ಸ್ವಾಗತಾರ್ಹ. ಸೋಮವಾರ ರ್ಯಾಲಿಗೂ ಇದೇ ಮಾದರಿಯಲ್ಲಿ ಜನಬೆಂಬಲ ಸಿಗುವ ನಿರೀಕ್ಷೆ ಇದ್ದು, ನಮ್ಮ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದರು.

ವಕ್ರ್ಸ್‍ಶಾಪ್ ಮಾಲೀಕರು ಮತ್ತು ನೌಕರರ ಸಂಘದ ಪದಾಧಿಕಾರಿಗಳಾದ ಪೂವಯ್ಯ, ಸಂಜು, ಶಿವು, ರಂಜಿತ್, ವಿ.ಪಿ. ನಾಗೇಶ್, ಸಿ.ಎ. ಮದನ, ಕಾವೇರಿ ಲಾರಿ ಮಾಲೀಕರ ಸಂಘದ ಡಿ.ಕೆ. ಗಣೇಶ್, ಚಂದ್ರಶೇಖರ್, ದಿನೇಶ್, ಸಿದ್ದರಾಜು, ಮಿನಿಲಾರಿ ಮಾಲಿಕರ ಸಂಘದ ರಾಜಣ್ಣ, ಷಂಶುದ್ದೀನ್, ಹೋರಾಟ ಸಮಿತಿಯ ಜಿ.ಎಲ್. ನಾಗರಾಜ್, ಎಂ.ಹೆಚ್. ಫಜಲುಲ್ಲಾ, ಪಿ.ಕೆ. ಜಗದೀಶ್ ಮತ್ತಿತರರಿದ್ದರು.