ಸೋಮವಾರಪೇಟೆ, ಅ. 29: ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತೀವ್ರಗಾಯಗೊಂಡಿದ್ದ ಮಹಿಳೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಸಮೀಪದ ಗರಗಂದೂರು ನಿವಾಸಿ ಮಲ್ಲೇಶ್ ಎಂಬವರ ಪತ್ನಿ ಲಲಿತಾ(56) ಮೃತಪಟ್ಟವರು.

ಸೋಮವಾರಪೇಟೆ ಶನಿವಾರಸಂತೆ ರಾಜ್ಯ ಹೆದ್ದಾರಿಯ ಹೊನ್ನವಳ್ಳಿ ಗ್ರಾಮದ ಸಮೀಪ ಶನಿವಾರ ಬೆಳಿಗ್ಗೆ 8ಗಂಟೆಗೆ ಅಪಘಾತ ಸಂಭವಿಸಿತ್ತು.

ಬೆಂಗಳೂರಿನಿಂದ ಗರಗಂದೂರಿಗೆ ಆಗಮಿಸುತ್ತಿದ್ದ ಸಚಿನ್ ಎಂಬವರು ಚಾಲಿಸುತ್ತಿದ್ದ ಮಾರುತಿ ಸೆಲೆರಿಯೋ ವಾಹನಕ್ಕೆ ಎದುರು ಭಾಗದಿಂದ ಬರುತ್ತಿದ್ದ ಹಾಸನ ಜಿಲ್ಲಾ ಸರ್ಕಾರಿ ಇಲಾಖೆಗೆ ಸೇರಿದ ಬೊಲೆರೋ ವಾಹನ ಚಾಲಕನ ಅಜಾಗರೂಕತೆಯಿಂದಾಗಿ ಢಿಕ್ಕಿಯಾಗಿ, ನಾಲ್ವರು ಗಾಯಗೊಂಡಿದ್ದರು.

ಕಾರಿನ ಒಳಗಿದ್ದ ಗರಗಂದೂರಿನ ಚಾಲಕ ಸಚಿನ್ ಮತ್ತು ರಂಜನ್ ಸೇರಿದಂತೆ ಬೊಲೆರೋ ವಾಹನದ ಚಾಲಕ ಮಹೇಶ್ ಅವರುಗಳಿಗೆ ಗಾಯಗಳಾಗಿದ್ದವು. ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾಗಿದ್ದ ಸಚಿನ್ ಅವರ ತಾಯಿ ಲಲಿತ ಅವರಿಗೆ ಪ್ರಥಮ ಚಿಕಿತ್ಸೆಯ ನಂತರ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಬೆಂಗಳೂರಿಗೆ ತಲುಪುವ ಮೊದಲೆ ಮೃತಪಟ್ಟ ಹಿನ್ನೆಲೆ, ವಾಪಾಸ್ಸು ಸೋಮವಾರಪೇಟೆ ಸರ್ಕಾರಿ ಆಸ್ಪತ್ರಗೆ ತಂದು ಶವ ಪರೀಕ್ಷೆಯ ನಂತರ ಭಾನುವಾರ ಗರಗಂದೂರು ಗ್ರಾಮದಲ್ಲಿ ಶವಸಂಸ್ಕಾರ ನಡೆಸಲಾಯಿತು. ಮೃತರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಚಿನ್ ನೀಡಿದ ದೂರಿನ ಅನ್ವಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಬೊಲೆರೋ ವಾಹನ ಚಾಲಕ ಮಹೇಶ್ ವಿರುದ್ದ ಪ್ರಕರಣ ದಾಖಲಾಗಿದೆ.