ಮಡಿಕೇರಿ, ಅ. 29: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ತನ್ನ ಪತ್ನಿ ರಮ್ಯ ಎಂಬಾಕೆಗೆ ನಿನ್ನೆ ಬೆಳಿಗ್ಗೆ ಗುಂಡು ಹಾರಿಸಿ ಕೊಲೆಗೈಯ್ಯಲು ಯತ್ನಿಸಿರುವ ಆರೋಪಿ ಪತಿ ಕೊಚ್ಚೇರ ನಂದ ಪಳಂಗಪ್ಪನಿಗಾಗಿ ಇಂದು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.ಗುಂಡೇಟಿನಿಂದ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಆರೋಪಿಯ ಪತ್ನಿ ರಮ್ಯ ಅವರ ಕುಟುಂಬಸ್ಥರು ನೀಡಿರುವ ಸುಳಿವಿನ ಪ್ರಕಾರ, ನಿನ್ನೆ ಬೆಳಿಗ್ಗೆ ಆರೋಪಿ ಗುಂಡು ಹಾರಿಸಿದ ಬೆನ್ನಲ್ಲೇ ಸ್ಥಳದಿಂದ ಕೋವಿ ಯೊಂದಿಗೆ ಪರಾರಿಯಾಗಿದ್ದಾನೆ.ಬಳಿಕ ಕೆಲವೇ ಸಮಯದಲ್ಲಿ ಮತ್ತೊಂದು ಗುಂಡು ಹಾರಿಸಿದ ಶಬ್ಧ ಕೇಳಿ ಬಂದಿದೆಯಂತೆ. ಬಹುಶಃ ಪತ್ನಿ ರಮ್ಯ ಗುಂಡೇಟಿನಿಂದ ಸತ್ತಿರುವ ಊಹೆಯೊಂದಿಗೆ ಆರೋಪಿ ತಾನು ಗುಂಡು ಹೊಡೆದುಕೊಂಡಿರುವ ಗುಮಾನಿ ವ್ಯಕ್ತವಾಗಿದೆ.

ಈ ಸಲುವಾಗಿ ಇಂದು ವೀರಾಜಪೇಟೆ ಗ್ರಾಮಾಂತರ ಪೊಲೀಸರ 15 ಮಂದಿ ತಂಡ ಕೆದಮುಳ್ಳೂರು ಸುತ್ತ ಮುತ್ತಲಿನ ಅರಣ್ಯ ಮುಂತಾದೆಡೆ ಹುಡುಕಾಟ ನಡೆಸಿದರೂ ಯಾವದೇ ಸುಳಿವು ಲಭಿಸಿಲ್ಲವೆಂದು ಮೂಲಗಳು ತಿಳಿಸಿವೆ. ಇನ್ನೊಂದು ತಂಡ ಆರೋಪಿಯ ಊರು ಹಮ್ಮಿಯಾಲಕ್ಕೆ ತೆರಳಿ ಮಾಹಿತಿ ಕಲೆ ಹಾಕಿರುವದಾಗಿಯೂ ಗೊತ್ತಾಗಿದೆ.