ಮಡಿಕೇರಿ, ಅ. 30: ಕೆದಮುಳ್ಳೂರು ಗ್ರಾಮದಲ್ಲಿ ತನ್ನ ಪತ್ನಿ ರಮ್ಯಾ ಎಂಬಾಕೆಯ ಮೇಲೆ ತಾ. 28 ರಂದು ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸುವದರೊಂದಿಗೆ ತಲೆಮರೆಸಿಕೊಂಡಿರುವ ಆರೋಪಿ, ಹಮ್ಮಿಯಾಲ ಗ್ರಾಮದ ಕೊಚ್ಚೇರ ನಂದ ಪಳಂಗಪ್ಪ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಇತ್ತ ಆತನ ಗಾಯಾಳು ಪತ್ನಿ ರಮ್ಯ ಇಬ್ಬರು ಪುಟ್ಟ ಕಂದಮ್ಮ ಗಳೊಂದಿಗೆ ತನ್ನ ತಾಯಿ ಲೀಲಾವತಿ ಯೊಡನೆ ಕಣ್ಣೀರಿನೊಂದಿಗೆ, ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಾಲ್ಕು ವರ್ಷ ಹಿಂದೆ ವಿವಾಹವಾದಾಗಿನಿಂದಲೂ ಆರೋಪಿಯು ನಿರಂತರ ದೈಹಿಕ ಹಲ್ಲೆಯೊಂದಿಗೆ ಕಿರುಕುಳ ನೀಡುತ್ತಿದ್ದುದಾಗಿ ರಮ್ಯ ತಾಯಿ ಲೀಲಾವತಿ ಆರೋಪಿಸಿದ್ದಾರೆ.

ಅಲ್ಲದೆ ಆರೋಪಿಯು ಶುಕ್ರವಾರ ರಾತ್ರಿಯೇ ಮನೆ ಬಳಿ ಕಾಫಿ ತೋಟದೊಳಗೆ ಅಡಗಿಕೊಂಡು ಶನಿವಾರ ಬೆಳಿಗ್ಗೆ ಮಗಳಿಗೆ ಗುಂಡು ಹಾರಿಸಿದಲ್ಲದೆ, ರಕ್ತದ ಮಡುವಿನಲ್ಲಿ ಗುಂಡೇಟಿನಿಂದ ಬಿದ್ದ ಮಗಳು ರಮ್ಯಳನ್ನು ಅಕ್ಕಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ಕರೆತರುವ ವೇಳೆ, ಆರೋಪಿ ಅವಿತುಕೊಂಡು ನೋಡುತ್ತಿದ್ದುದನ್ನು ಕಂಡಿರುವದಾಗಿ ಬಹಿರಂಗಗೊಳಿಸಿದ್ದಾರೆ.