ಕುಶಾಲನಗರ, ಅ. 30: ರಾಜ್ಯದಲ್ಲಿ ನೂತನವಾಗಿ ರಚನೆಗೊಳ್ಳಲಿರುವ 50 ತಾಲೂಕುಗಳ ಜೊತೆಗೆ 51ನೇ ತಾಲೂಕಾಗಿ ಪ್ರಸ್ತಾವಿತ ಕಾವೇರಿ ತಾಲೂಕನ್ನು ಅನುಷ್ಠಾನಗೊಳಿಸುವಂತೆ ಕುಶಾಲನಗರದಲ್ಲಿ ಬೃಹತ್ ರ್ಯಾಲಿ ಮೂಲಕ ಎರಡು ಹೋಬಳಿಗಳ ಜನತೆ ಹಕ್ಕೊತ್ತಾಯ ನಿರ್ಣಯ ಕೈಗೊಂಡರು.ಕಳೆದ ಎರಡು ದಶಕಗಳಿಂದ ಸರಕಾರದ ಮುಂದೆ ನೂತನ ತಾಲೂಕು ರಚನೆಯ ಕನಸು ಹೊಂದಿರುವ ಕಾವೇರಿ ತಾಲೂಕು ಹೋರಾಟ ಸಮಿತಿ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯಲ್ಲಿ ಈ ನಿರ್ಣಯ ಮಂಡಿಸಲಾಯಿತು.ಎಲ್ಲಾ ಮಾನದಂಡ ಹೊಂದಿದ್ದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತಾಲೂಕು ರಚನೆಯ ಅನಿವಾರ್ಯತೆ ಬಗ್ಗೆ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದರೂ ಯಾವದೇ ರೀತಿಯ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯ ಜನರು ಕುಶಾಲನಗರದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸುವದರೊಂದಿಗೆ ತಾಲೂಕು ಪರ ಘೋಷಣೆ ಕೇಳಿಬಂತು.

ಕುಶಾಲನಗರದ - ಮಡಿಕೇರಿ ರಸ್ತೆಯ ತಾವರೆಕೆರೆ ಬಳಿಯಿಂದ ಹೊರಟ ಹೋರಾಟ ಸಮಿತಿಯ ಕೇಂದ್ರ ಮತ್ತು ಸ್ಥಾನೀಯ ಸಮಿತಿಗಳ ಪ್ರಮುಖರು, ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಒಗ್ಗಟ್ಟನ್ನು ಪ್ರದರ್ಶಿಸಿದರು. ತಮ್ಮ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಕುಶಾಲನಗರದಲ್ಲಿ ವಿವಿಧ ಸಂಘಟನೆಗಳು ನಿರಂತರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವದರೊಂದಿಗೆ ಎರಡು ಹೋಬಳಿಯ ಗ್ರಾಮಗಳಲ್ಲಿ ಸ್ಥಾನೀಯ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಈ ನಡುವೆ ಹೋರಾಟ ಸಮಿತಿಯ ಪ್ರಮುಖರು ಮುಖ್ಯಮಂತ್ರಿಗಳನ್ನು, ಸರಕಾರದ ಸಚಿವರುಗಳನ್ನು ಭೇಟಿ ಮಾಡಿ ನೂತನ ತಾಲೂಕು ರಚನೆ ಪಟ್ಟಿಗೆ ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ರಚನೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಇದೀಗ ಬೃಹತ್ ರ್ಯಾಲಿ ನಡೆಸುವದರೊಂದಿಗೆ ಸರಕಾರದ ಗಮನ ಸೆಳೆಯಲು ಪ್ರಯತ್ನ ನಡೆದಿದೆ. ರ್ಯಾಲಿಯಲ್ಲಿ ಹೋರಾಟ ಸಮಿತಿಯ ಕೇಂದ್ರ ಸಮಿತಿ ನೇತೃತ್ವದಲ್ಲಿ 19 ಸ್ಥಾನೀಯ ಸಮಿತಿಗಳ ಪ್ರಮುಖರು, ನೆರೆಯ ಮುಳ್ಳುಸೋಗೆ, ಹೆಬ್ಬಾಲೆ, ಕೂಡಿಗೆ, ನೆಲ್ಲಿಹುದಿಕೇರಿ, ಸುಂಟಿಕೊಪ್ಪ, ವಾಲ್ನೂರು-ತ್ಯಾಗತ್ತೂರು, ಕಂಬಿಬಾಣೆ, ಕೊಡಗರಹಳ್ಳಿ, 7ನೇ ಹೊಸಕೋಟೆ, ಗುಡ್ಡೆಹೊಸೂರು, ಅಲ್ಲದೆ ವಿವಿಧ ಸಂಘಟನೆಗಳಾದ ರಾಜಸ್ಥಾನ ಸಮಾಜ, ಬ್ರಾಹ್ಮಣ ಸಮಾಜ, ಜಾಮಿಯ, ಹಿಲಾಲ್ ಮಸೀದಿ, ಸವಿತಾ ಸಮಾಜ, ಎನ್‍ಟಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಫುಟ್ಪಾತ್ ವ್ಯಾಪಾರಿಗಳು, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ವರ್ಕ್‍ಶಾಪ್ ಮಾಲೀಕರು, ಕಾರ್ಮಿಕರ ಸಂಘ, ಗೆಳೆಯರ ಬಳಗ, ಅಲ್ ಇಸಾನ್ ಕಮಿಟಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡು ತಾಲೂಕು ರಚನೆಯ ಬಗ್ಗೆ ಘೋಷಣೆ ಮೊಳಗಿಸಿದರು. ಹೋರಾಟ ಸಮಿತಿಯ ಸಂಚಾಲಕÀ ವಿ.ಪಿ.ಶಶಿಧರ್ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಶಾಸಕ ಅಪ್ಪಚ್ಚುರಂಜನ್, ಜಿಲ್ಲಾ ಪಂಚಾಯ್ತಿ ಸದಸ್ಯರುಗಳು, ಜನಪ್ರತಿನಿಧಿಗಳು, ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರಬಾಬು, ಅಬ್ದುಲ್ ಖಾದರ್, ಜಿ.ಎಲ್.ನಾಗರಾಜ್ ಸೇರಿದಂತೆ ಸ್ಥಾನೀಯ ಸಮಿತಿಗಳ ಪ್ರಮುಖರು ಪಾಲ್ಗೊಂಡಿದ್ದರು.

ಕುಶಾಲನಗರ ಪಟ್ಟಣದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ನಡೆಸಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ರ್ಯಾಲಿಗೆ ಬೆಂಬಲ ವ್ಯಕ್ತಪಡಿಸಲಾಯಿತು. ಕುಶಾಲನಗರ ಡಿವೈಎಸ್ಪಿ ಸಂಪತ್‍ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.