ಶ್ರೀಮಂಗಲ, ನ.1 : ರೂ. 4.94 ಕೋಟಿ ವೆಚ್ಚದಲ್ಲಿ ಟಿ.ಶೆಟ್ಟಿಗೇರಿ-ಬಿರುನಾಣಿ ಮುಖ್ಯ ರಸ್ತೆಯ 7.5 ಕಿ.ಮೀ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತರಾಮ್ ಭೂಮಿಪೂಜೆ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಅವರು ರಸ್ತೆ ಅಗಲೀಕರಣಕ್ಕೆ ರಸ್ತೆಯ ಒತ್ತಿನಲ್ಲಿರುವ ಜಾಗದ ಮಾಲೀಕರು ಅಗತ್ಯ ಜಾಗ ಬಿಟ್ಟುಕೊಟ್ಟು ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಬೇಕು. ಅಲ್ಲದೆ, ರಸ್ತೆಯ ಎರಡು ಕಡೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ಎಲ್ಲಾ ಮನೆಗಳಲ್ಲಿ ಎರಡು ಮೂರು ವಾಹನಗಳನ್ನು ಜನರು ಹೊಂದಿದ್ದಾರೆ. ಆದ್ದರಿಂದ ವಾಹನ ಸಂಚಾರದ ಅನುಕೂಲಕ್ಕಾಗಿ ನಿರ್ಮಿಸುವ ಈ ರಸ್ತೆಗೆ ಅಗತ್ಯವಾದ ಜಾಗ ಬಿಟ್ಟುಕೊಡಲು ಯಾರು ತಕರಾರು ಮಾಡದೆ ಸಹಕಾರ ನೀಡುವಂತೆ ಹೇಳಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಟಿ.ಶೆಟ್ಟಿಗೇರಿ ವಲಯ ಕಾಂಗ್ರೇಸ್ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಹಾಗೂ ಟಿ.ಶೆಟ್ಟಿಗೇರಿ ವಲಯ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶು ಅವರುಗಳು ಮಾತನಾಡಿದರು.

ಇಂಜಿನಿಯರ್ ಸುರೇಶ್ ಅವರು ಮಾತನಾಡಿ ಕಾಮಗಾರಿಯನ್ನು ಪೊನ್ನಂಪೇಟೆ ಗುತ್ತಿಗೆದಾರ ಎ.ಆರ್.ವೇಣುಗೋಪಾಲ್ ಟೆಂಡರ್ ಪಡೆದಿದ್ದಾರೆ. ಆರು ತಿಂಗಳ ಸಮಯದಲ್ಲಿ 7.5 ಕಿ.ಮೀ ರಸ್ತೆಯನ್ನು ಪ್ರಸ್ತುತ ಮೂರು ಮೀಟರ್ ಅಗಲವಿರುವದನ್ನು 5.5 ಮೀಟರ್‍ಗೆ ವಿಸ್ತರಿಸಿ ಡಾಂಬರೀಕರಣ ಮಾಡುವದು ಹಾಗೂ ಈ ರಸ್ತೆಯ ನಡುವೆ 7 ಕಡೆ ಹೊಸ ಮೋರಿ ನಿರ್ಮಾಣ ಮಾಡುವದು ಸೇರಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಶಿವು ಮಾದಪ್ಪ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಜಿಲ್ಲಾಧಿಕಾರಿ ವಿನ್ಸಂಟ್ ಡಿಸೋಜ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್, ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ಟಿ.ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶು, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಡಿಸಿಸಿ ಉಪಾಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪೆಮ್ಮಂಡ ರಾಜ, ತಾ.ಪಂ ಸದಸ್ಯರಾದ ಪಲ್ವೀನ್ ಪೂಣಚ್ಚ, ಆಶಾ ಜೇಮ್ಸ್ ಮತ್ತಿತರರು ಪಾಲ್ಗೊಂಡಿದ್ದರು.