ಶನಿವಾರಸಂತೆ, ನ. 1: ಶನಿವಾರಸಂತೆ ಸಮೀಪದ ಗುಂಡೂರಾವ್ ಬಡಾವಣೆ ನಿವಾಸಿ ಕೂಲಿ ಕಾರ್ಮಿಕರೊಬ್ಬರಿಗೆ ಶನಿವಾರಸಂತೆ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಮೋಟಾರ್ ಸೈಕಲ್ ನಂ. (ಕೆಎ 12 ಎಲ್ 5201) ಡಿಕ್ಕಿಪಡಿಸಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಗುಂಡೂರಾವ್ ಬಡಾವಣೆಯ ನಿವಾಸಿಗಳಾದ ಸರೋಜ ಹಾಗೂ ಪತಿ ಈರಪ್ಪ ಅವರುಗಳು ಶನಿವಾರ ಸಂಜೆ ಸಂತೆ ಮಾರುಕಟ್ಟೆಗೆ ಹೋಗಿ ಸಾಮಾನು ತೆಗೆದುಕೊಂಡು ಮನೆಗೆ ವಾಪಸು ಬರುತ್ತಿರುವಾಗ ಸಾರ್ವಜನಿಕ ರಸ್ತೆಯಲ್ಲಿ ಹಿಂಬದಿಯಿಂದ ಮೋಟಾರ್ ಸೈಕಲ್ ಸವಾರ ಸೂಫಿ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಕೆಳಗಡೆ ಬಿದ್ದ ಈರಪ್ಪ ಅವರಿಗೆ ತಲೆಗೆ ಗಾಯವಾಗಿದ್ದು, ಗಾಯಾಳುವನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತ್ನಿ ಸರೋಜ ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಹೆಚ್.ಎಂ. ಗೋವಿಂದ್ ಅವರು ಮೋಟಾರ್ ಸೈಕಲ್‍ನ್ನು ವಶಪಡಿಸಿಕೊಂಡು ವಿಧಿ 279, 337, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ.