ಮಡಿಕೇರಿ, ನ. 1: ಪಾಲೆಮಾಡುವಿನಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಕಾಯ್ದಿರಿಸಿರುವ ಸ್ಥಳದಲ್ಲೇ ಸ್ಮಶಾನಕ್ಕೆ ಆಗ್ರಹಿಸಿ ಅಲ್ಲಿನ ನಿವಾಸಿ ಮೊಣ್ಣಪ್ಪ ಹಾಗೂ ಇತರರು ಧರಣಿಯಲ್ಲಿ ಭಾಗವಹಿಸಿಲ್ಲವೆಂದು ಕೆಲವರ ಮೇಲೆ ಹಲ್ಲೆ ನಡೆಸಿರುವದಾಗಿ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರೀಡಾಂಗಣದೊಳಗೆ ಅಕ್ರಮ ಪ್ರವೇಶಿಸಿ ಬಿಡಾರ ನಿರ್ಮಿಸುವದರೊಂದಿಗೆ ಮೊಣ್ಣಪ್ಪ ಹಾಗೂ ಇತರರು ಸಾರ್ವಜನಿಕರನ್ನು ನಿಂದಿಸುತ್ತಿರುವದಾಗಿ ಪ್ರತ್ಯೇಕ ದೂರು ದಾಖಲಾಗಿದೆ. ಅಲ್ಲದೆ ಅಲ್ಲಿನ ನಿವಾಸಿ ರಾಧಾ ಎಂಬವರ ಮೇಲೆ ಮತ್ತು ಸದಾಶಿವ ಎಂಬವರ ಮೇಲೆ ಮೊಣ್ಣಪ್ಪ ಮತ್ತಿತರರು ಹಲ್ಲೆ ನಡೆಸಿರುವದಾಗಿಯೂ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿದ್ದಾರೆ.

ಅಲ್ಲದೆ ಸದಾಶಿವ ಹಾಗೂ ಇತರರು ಜಾತಿ ನಿಂದನೆಯೊಂದಿಗೆ ಹಲ್ಲೆಗೆ ಯತ್ನಿಸಿರುವದಾಗಿ ಜಗದೀಶ್ ಎಂಬವರು ಮೊಣ್ಣಪ್ಪ ತಂಡದಿಂದ ಪ್ರತ್ಯೇಕ ಪುಕಾರು ನೀಡಿರುವದಾಗಿಯೂ ಪೊಲೀಸ್ ಮೂಲಗಳು ತಿಳಿಸಿದೆ. ಈ ಎಲ್ಲ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಠಾಣಾಧಿಕಾರಿ ಬೋಜಪ್ಪ ಅವರು ಪ್ರತಿಕ್ರಿಯಿಸಿದ್ದಾರೆ. ಇಂದು ಕೂಡ ಧರಣಿ ಮುಂದುವರಿದಿದ್ದು, ತಾ. 2 ರಂದು (ಇಂದು) ಉಪವಾಸ ಸತ್ಯಾಗ್ರಹ ಆರಂಭಿಸುವದಾಗಿ ಮೊಣ್ಣಪ್ಪ ಘೋಷಿಸಿದ್ದಾರೆ.