ಕುಶಾಲನಗರ, ನ. 2: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚೆನ್ನೈ ಸಿಬಿಐ ತನಿಖಾ ತಂಡದ ಎಸ್ಪಿ ನೇತೃತ್ವದಲ್ಲಿ ಐವರು ಅಧಿಕಾರಿಗಳು ಗಣಪತಿ ಅವರ ರಂಗಸಮುದ್ರದಲ್ಲಿರುವ ಮನೆಗೆ ಮಂಗಳವಾರ ರಾತ್ರಿ ಭೇಟಿ ನೀಡಿದ್ದಾರೆ.

ಗಣಪತಿ ಅವರ ತಂದೆ ಎಂ.ಕೆ.ಕುಶಾಲಪ್ಪ, ಸಹೋದರ ಎಂ.ಕೆ. ಮಾಚಯ್ಯ ಮತ್ತು ಕುಟುಂಬ ಸದಸ್ಯರೊಂದಿಗೆ ಅಧಿಕಾರಿಗಳು ಕೆಲವು ಮಾಹಿತಿಗಳನ್ನು ಕಲೆಹಾಕಿದ್ದು ಸದ್ಯದಲ್ಲಿಯೇ ಮತ್ತೆ ಭೇಟಿ ನೀಡಿ ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸುವದಾಗಿ ತಿಳಿಸಿ ತೆರಳಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಣಪತಿ ಅವರು ಆತ್ಮಹತ್ಯೆ ಮಾಡಿ ಕೊಂಡ ಮಡಿಕೇರಿಯ ಖಾಸಗಿ ಲಾಡ್ಜ್, ಮಂಗಳೂರಿನಲ್ಲಿ ಗಣಪತಿ ಅವರ ಪತ್ನಿ ನಿವಾಸಕ್ಕೆ ತಂಡ ಭೇಟಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿ ದಂತೆ ಕೆಲವು ಪೂರಕ ಮಾಹಿತಿ ಗಳನ್ನು ಕಲೆ ಹಾಕಿರುವದಾಗಿ ತಿಳಿದುಬಂದಿದೆ.