ವಿಶೇಷ ವರದಿ: ಕೆ.ಕೆ. ನಾಗರಾಜ ಶೆಟ್ಟಿ

ಕೂಡಿಗೆ, ನ. 4: ಸರಕಾರದ ನಿಯಮಾನುಸಾರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ಸಹ ರೇಷ್ಮೆ ಇಲಾಖೆಯ ಕಚೇರಿ ಇದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವದರಿಂದ ಜಿಲ್ಲೆಯ ಮೂರು ತಾಲೂಕುಗಳಲ್ಲಿ ರೇಷ್ಮೆ ಬೆಳೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಸೋಮವಾರಪೇಟೆ ತಾಲೂಕು ಮತ್ತು ಮಡಿಕೇರಿ ತಾಲೂಕಿನ ಕೆಲವು ಭಾಗಗಳಲ್ಲಿ 25 ವರ್ಷಗಳಿಂದಲೂ ಆಯಾ ಭಾಗದ ರೈತರುಗಳು ಕಷ್ಟ-ನಷ್ಟಗಳ ನಡುವೆ ತಮ್ಮ ಜಮೀನುಗಳಲ್ಲಿ ಹಿಪ್ಪ್ಪುನೇರಳೆ ಗಿಡಗಳನ್ನು ನೆಟ್ಟು ರೇಷ್ಮೆ ಮೊಟ್ಟೆಯನ್ನು ತಂದು ರೇಷ್ಮೆ ಬೆಳೆಯನ್ನು (ಗೂಡು) ಬೆಳೆದು ಮಾರಾಟ ಮಾಡುತ್ತಿದ್ದರು. ಆದರೆ ರೈತರುಗಳಿಗೆ ಉತ್ತೇಜನ ಮತ್ತು ತರಬೇತಿ ನೀಡಿ ಸೂಕ್ತ ಮಾಹಿತಿ ನೀಡಲು ಕಳೆದ 10 ವರ್ಷಗಳಿಂದ ಜಿಲ್ಲೆಯ ರೇಷ್ಮೆ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸರಕಾರ ನೇಮಕ ಮಾಡದೆ ಬರಿ ಮಾತಿಗಷ್ಟೆ ಉತ್ತೇಜನ ನೀಡುವಂತೆ ಹೇಳುತ್ತಾ ಬಂದಿದೆ. ಆದ್ದರಿಂದ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದನೆ ಕಡಿಮೆಯಾಗುತ್ತಿದ್ದು, ರೇಷ್ಮೆ ಬೆಳೆಯುವ ರೈತರು ಕೂಡಾ ಕಡಿಮೆಯಾಗುತ್ತಿದ್ದಾರೆ. ರೈತರುಗಳು ತಮ್ಮ ಅಲ್ಪ ಜಮೀನಿನಲ್ಲಿ ಹಿಪ್ಪನೇರಳೆ ಗಿಡಗಳನ್ನು ನೆಟ್ಟಿದ್ದನ್ನು ಕಿತ್ತು ತಮ್ಮ ಆರ್ಥಿಕ ಮೌಲ್ಯವನ್ನು ವೃದ್ಧಿಕೊಳ್ಳಲು ಬೇರೆ ಬೆಳೆಗಳನ್ನು ಅವಲಂಭಿಸುತ್ತಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ರೇಷ್ಮೆ ಉಪ ನಿರ್ದೇಶಕರ ಹುದ್ದೆ ಹಾಗೂ ಸಹಾಯಕ ನಿರ್ದೇಶಕರ ಹುದ್ದೆಗಳು ಖಾಲಿ ಖಾಲಿ...! ಪ್ರಸ್ತುತ ರೇಷ್ಮೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಅಧಿಕಾರಿಯಿದ್ದು, ಈ ಅಧಿಕಾರಿಯೂ ಜಿಲ್ಲೆಯ ಪ್ರಬಾರ ಹೊರತು ನೇಮಕಾತಿಯವರಲ್ಲ. ಈಗಿರುವ ಸಹಾಯಕ ನಿರ್ದೇಶಕರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾಗಿರುತ್ತಾರೆ.

ಜಿಲ್ಲೆಯಲ್ಲಿ 30 ರೇಷ್ಮೆ ಬೆಳೆಗಾರರನ್ನು ಸೋಮವಾರಪೇಟೆ ತಾಲೂಕು ಹೊಂದಿದ್ದು, ಈ ವ್ಯಾಪ್ತಿಗೆ ಮೂರು ತಾಂತ್ರಿಕ ಕೇಂದ್ರ, ಮೂರು ರೇಷ್ಮೆ ಸೇವಾ ಕೇಂದ್ರಗಳು ಬರುತ್ತವೆ. ಇವುಗಳಲ್ಲಿ ಒಂದು ಸೋಮವಾರಪೇಟೆ ವಿಸ್ತರಣಾ ಕೇಂದ್ರ, ಕೊಡ್ಲಿಪೇಟೆ ವಿಸ್ತರಣಾ ಕೇಂದ್ರಗಳಾಗಿವೆ. ಈ ವಿಸ್ತರಣಾ ಕೇಂದ್ರಗಳ ಮೂಲಕ ರೈತರುಗಳಿಗೆ ರೇಷ್ಮೆ ಬೆಳೆಯನ್ನು ಬೆಳೆಯಲು ತರಬೇತಿ ಮತ್ತು ಬೆಳೆಗೆ ತಗುಲುವ ಸೋಂಕು ನಿರ್ವಹಣೆಯ ಬಗ್ಗೆ ಮಾಹಿತಿ ನೀಡುವದು ಮುಖ್ಯವಾಗಿರುತ್ತದೆ.

ಆದರೆ, ಕಳೆದ ಹತ್ತು ವರ್ಷಗಳಿಂದ ಹದಿನೇಳು ಜನ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದರು. ಕಳೆದ ಸಾಲಿನಲ್ಲಿ ಇದ್ದ ಹದಿನೇಳು ಮಂದಿಯಲ್ಲಿ ಎಂಟು ಮಂದಿ ನಿವೃತ್ತಿ, 4 ಮಂದಿ ವರ್ಗಾವಣೆಯಾದ ನಂತರ ಈಗಿರುವದು ಕೇವಲ 5 ಮಂದಿ ಸಿಬ್ಬಂದಿಗಳು. ಈಗಿರುವ ಐದು ಹುದ್ದೆಗಳಲ್ಲಿ ಮೂರು ಸಿ ದರ್ಜೆ ನೌಕರರು, ಎರಡು ಡಿ ದರ್ಜೆ ಸಿಬ್ಬಂದಿಗಳು ಮಾತ್ರ. ಜಿಲ್ಲೆಯಲ್ಲಿ ಇದೀಗ 20 ಹುದ್ದೆಗಳು ಖಾಲಿ ಇವೆ. ಈಗಿರುವ 5 ಹುದ್ದೆಗಳಲ್ಲಿ ಕೂಡಿಗೆಯ ಕೃಷಿ ರೇಷ್ಮೆ ಕ್ಷೇತ್ರದಲ್ಲಿ ರೇಷ್ಮೆ ನಿರೀಕ್ಷಕರು ಎರಡು, ಪ್ರವರ್ತಕರು ಒಬ್ಬರು, ಇಬ್ಬರು ಡಿ ದರ್ಜೆ ನೌಕರರು ಮಾತ್ರ ಇದ್ದಾರೆ. ಇವರುಗಳಲ್ಲಿ ಜಿಲ್ಲಾ ಕೇಂದ್ರದ ಕಚೇರಿಯಲ್ಲಿ ಒಬ್ಬ ನಿರೀಕ್ಷಕ ಮತ್ತು ಒಬ್ಬ ಡಿ ದರ್ಜೆ ನೌಕರರ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರ ಸಿಬ್ಬಂದಿಗಳನ್ನು ನೇಮಕ ಮಾಡದೆ, ಬೇರೆ ಜಿಲ್ಲೆಗಳಿಂದ ಅಧಿಕಾರಿಗಳನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಿದರೂ ಸಹ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೊಡಗು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇವುಗಳ ನಡುವೆ ಯುವ ರೈತರಿಗೆ ತರಬೇತಿ ನೀಡುವದಾದರೂ ಎಲ್ಲಿ? ರೇಷ್ಮೆ ಬೆಳೆಯ ಅಭಿವೃದ್ಧಿ ಮಾಡುವದಾದರು ಎಲ್ಲಿ?

ರೇಷ್ಮೆ ಇಲಾಖೆಗೆ ಜಿಲ್ಲಾ ಮಟ್ಟದಿಂದ ಬಿಡುಗಡೆ ಆಗುವ ರೂ. 50,000 ಹಣದಲ್ಲಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ತರಬೇತಿ ನೀಡಲು ಮತ್ತು ಬೆಳೆಗಳಿಗೆ ತಗಲುವ ಸೋಂಕು ನಿರ್ವಾಹಕ ಔಷಧಿಗಳ ಖರೀದಿಗೆ ಉಪಯೋಗಿಸಲಾಗುವದು.

ಕರ್ನಾಟಕ ರಾಜ್ಯದಲ್ಲಿಯೇ ಹೆಚ್ಚು ಬೇಡಿಕೆ ಇದ್ದ ಕೂಡಿಗೆಯ ರೇಷ್ಮೆ ಬಿತ್ತನೆ ಕೋಟೆ (ರೇಷ್ಮೆಮೊಟ್ಟೆ) ರೇಷ್ಮೆ ಉತ್ಪಾದನಾ ಕೇಂದ್ರ ಸಿಬ್ಬಂದಿಗಳಿಲ್ಲದೆ ಇದೀಗ ಮುಚ್ಚಲ್ಪಟ್ಟಿದೆ. ಕೂಡಿಗೆಯು ಅರೆಮಲೆನಾಡು ಪ್ರದೇಶವಾದ ಹಿನ್ನೆಲೆ ಈ ಕೇಂದ್ರದ ರೇಷ್ಮೆ ಮೊಟ್ಟೆಗಳಿಗೆ ಕಳೆದ ಹತ್ತು ವರ್ಷಗಳಿಂದಲೂ ಭಾರೀ ಬೇಡಿಕೆ ಇದ್ದು, ದೂರದ ಊರುಗಳಾದ ರಾಮನಗರ, ಚನ್ನಪಟ್ಟಣಗಳಿಂದಲೂ ರೈತರು ಬಂದು ರೇಷ್ಮೆ ಮೊಟ್ಟೆಗಳನ್ನು ತೆಗೆದುಕೊಂಡು ಹೋಗಿ ಉತ್ತಮವಾದ ರೇಷ್ಮೆ ಗೂಡುಗಳನ್ನು ಬೆಳೆಯುತ್ತಿದ್ದರು. ಇದರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಷ್ಮೆ ಮಾರುಕಟ್ಟೆಯು ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಸ್ಥಾಪನೆಗೊಂಡಿತ್ತು, ಆದರೆ ಆ ಮಾರುಕಟ್ಟೆಯು ಸಹ ಸ್ಥಗಿತಗೊಂಡು ಈ ಮಾರುಕಟ್ಟೆಯ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗೆ ನೀಡಲಾಗಿದೆ.

ಜಿಲ್ಲೆಯ ರೇಷ್ಮೆ ಕೃಷಿ ಕ್ಷೇತ್ರವಾದ ಕೂಡಿಗೆಯಲ್ಲಿ ಸರಕಾರದ ನಿರ್ಲಕ್ಷ್ಯದಿಂದ ಹಾಗು ಅಧಿಕಾರಿ ಮತ್ತು ಸಿಬ್ಬಂದಿಗಳ ನೇಮಕ ಇಲ್ಲದೆ ಇದ್ದ 30 ಎಕರೆ ಪ್ರದೇಶದಲ್ಲಿ 10 ಎಕರೆ ಪ್ರದೇಶವನ್ನು ಮೊರಾರ್ಜಿ ವಸತಿ ಶಾಲೆಗೆ, 5 ಎಕರೆ ಪ್ರದೇಶವನ್ನು ಉಗ್ರಾಣ ನಿರ್ಮಾಣಕ್ಕೆ (ಎಫ್‍ಸಿಐ) ನೀಡಲಾಗಿದೆ. ಇನ್ನುಳಿದ 15 ಎಕರೆ ಪ್ರದೇಶದಲ್ಲಿ ಈಗಿರುವ ಸಿಬ್ಬಂದಿಗಳು ವಿ1 ತಳಿಯ ಆಧುನಿಕ ತಂತ್ರಜ್ಞಾನದಿಂದ 3 ಎಕರೆ ಪ್ರದೇಶಕ್ಕೆ ಹಿಪ್ಪನೇರಳೆ ಗಿಡಗಳನ್ನು ನೆಟ್ಟು ಬೇಸಾಯ ಮಾಡುತ್ತಿದ್ದಾರೆ. ಈ ಬೇಸಾಯವು ಉತ್ತಮವಾಗಿದ್ದು, ಹಿಪ್ಪುನೇರಳೆ ಸೊಪ್ಪಿನಿಂದ ಬೇರೆ ಕೇಂದ್ರಗಳಿಂದ ರೇಷ್ಮೆ ಮೊಟ್ಟೆ ತಂದು ರೇಷ್ಮೆ ಗೂಡನ್ನು ಬೆಳೆಯಲು ಈಗಿರುವ ಅಧಿಕಾರಿ ಮುಂದಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಯು ವಾಣಿಜ್ಯ ಬೆಳೆಯ ಮಾದರಿಯಾಗಿದ್ದು, ಒಂದು ಕೆ.ಜಿ. ರೇಷ್ಮೆ ಗೂಡಿಗೆ ಎರಡು ಸಾವಿರದಿಂದ ಎರಡು ಸಾವಿರದ ಐನೂರು ಬೆಲೆ ಇರುವದರಿಂದ ಇಂದಿನ ವಿದ್ಯಾವಂತ ಯುವ ರೈತರು ಮತ್ತು ಮಹಿಳಾ ರೈತರುಗಳು ರೇಷ್ಮೆ ಬೆಳೆಯತ್ತ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿ ತರಬೇತಿ ಪಡೆಯಲು ಕೂಡಿಗೆ ಕ್ಷೇತ್ರಕ್ಕೆ ಬರುತ್ತಿದ್ದರೂ ಸಹ ತರಬೇತಿ ನೀಡಲು ಅಧಿಕಾರಿ ಮತ್ತು ಸಿಬ್ಬಂದಿಗಳು ಇಲ್ಲದಂತಾಗಿದೆ. ರೇಷ್ಮೆ ಬೆಳೆ ವಾಣಿಜ್ಯ ಬೆಳೆಯಾದ್ದರಿಂದ ವಿದ್ಯಾವಂತ ನಿರುದ್ಯೋಗಿ ಯುವಕರು ರೇಷ್ಮೆ ಬೆಳೆಯನ್ನು ಬೆಳೆಯುವತ್ತ ಮುಂದಾಗಿದ್ದಾರೆ. ಆದ್ದರಿಂದ ಸರಕಾರ ಜಿಲ್ಲಾ ಪಂಚಾಯಿತಿ ಮೂಲಕವಾದರೂ ಗುತ್ತಿಗೆ ಆಧಾರದ ಮೂಲಕ ಸಿಬ್ಬಂದಿಗಳನ್ನು ನೇಮಕ ಮಾಡಿ ತಾಲೂಕಿನ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಬೆಳೆಯ ಬಗ್ಗೆ ತರಬೇತಿ ನೀಡಲು ಮುಂದಾಗಬೇಕು.

ಈ ವ್ಯವಸ್ಥೆಗಳನ್ನು ಸರಿಪಡಿಸದಿದ್ದಲ್ಲಿ ಈಗಿರುವ 5 ಮಂದಿ ಸಿಬ್ಬಂದಿಗಳು ನಿವೃತ್ತಿಗೊಂಡು ಜಿಲ್ಲೆಯಲ್ಲಿ ರೇಷ್ಮೆ ಇಲಾಖೆ ಮುಚ್ಚಲ್ಪಟ್ಟು ಕೂಡಿಗೆಯಲ್ಲಿರುವ 15 ಎಕರೆ ಪ್ರದೇಶದ ರೇಷ್ಮೆ ಇಲಾಖೆಯ ಜಾಗವು ಬೇರೆ ಇಲಾಖೆಗಳ ಪಾಲಾಗುವ ಬದಲು ತಾಲೂಕಿನ ರೇಷ್ಮೆ ಬೆಳೆಗಾರರಿಗೆ ಉಪಯೋಗಕ್ಕೆ ಬರುವಂತಾಗಬೇಕು.