ಮಡಿಕೇರಿ, ನ. 4: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ನಡೆದ ರಸ್ತೆ ಅವಘಡವೊಂದರಲ್ಲಿ ಕೊಡಗಿನ ಯುವಕನೋರ್ವ ದುರ್ಮರಣಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಾಳ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹೆಬ್ಬಾಳದಲ್ಲಿ ಉದ್ಯೋಗದಲ್ಲಿದ್ದ ಜಿಲ್ಲೆಯ ಪಾರಾಣೆ ಕಿರುಂದಾಡುವಿನ ಮಚ್ಚಂಡ ಲರಿನ್ ಸೋಮಯ್ಯ (26) ದಾರುಣ ಸಾವಿಗೀಡಾಗಿದ್ದಾರೆ.ಮಚ್ಚಂಡ ಸಾಬ ದೇವಯ್ಯ ಹಾಗೂ ಶೀಲಾ ದಂಪತಿಯ ಏಕಮಾತ್ರ ಪುತ್ರನಾಗಿದ್ದ ಲರಿನ್ ಸೋಮಯ್ಯ ಕಳೆದ ಆರು ವರ್ಷದಿಂದ ಹೆಬ್ಬಾಳದ ಏನ್ಜ್ (ಂಓZ) ಬ್ಯಾಂಕ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಖಾಸಗಿ ಬ್ಯಾಂಕ್ 24x7 ಗಂಟೆ ಕೆಲಸ ನಿರ್ವಹಿಸಲಿದ್ದು, ನಿನ್ನೆ ರಾತ್ರಿ ಪಾಳಿಯ ಕೆಲಸ ಮುಗಿಸಿ ರಾತ್ರಿ 11.30ರ ವೇಳೆಗೆ ಅವರು ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಜೈಲೋ ಕಾರು ಡಿಕ್ಕಿಯಾಗಿದೆ. ಘಟನೆಯಿಂದ ಸೋಮಯ್ಯ ಸ್ಥಳದಲ್ಲೇ ದುರ್ಮರಣಗೊಂಡಿದ್ದು, ಡಿಕ್ಕಿಪಡಿಸಿದ ಕಾರು ಚಾಲಕ ಸ್ಥಳದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳದಲ್ಲಿ ದೊರೆತ ಸೋಮಯ್ಯ ಅವರ ಮೊಬೈಲ್‍ನಿಂದ ಸ್ಥಳೀಯರೊಬ್ಬರು ಅವಘಡದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪಾರಾಣೆಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು.