ಮಡಿಕೇರಿ, ನ. 6: ಧ್ವನಿ, ಬೆಳಕಿನಲ್ಲಿ ಮಿಂದೇಳುವ ಹಂಪಿ ಉತ್ಸವದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ನಗರದ ಜೋಡಿ ಕಲಾವಿದರು ಕೊಳಲು ವಾದನದ ಮೂಲಕ ಕಲಾಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸಿದರು.

ಅಂಬಳೆ ಹೇಮಂತ ಹಾಗೂ ಅಂಬಳೆ ಹೇರಂಬ ಸಹೋದರರು ಕೊಳಲು ವಾದನದಲ್ಲಿ ತಮ್ಮ ಕಲಾಪ್ರತಿಭೆಯನ್ನು ಮೆರೆದರು. ಈ ಜೋಡಿ ಮಡಿಕೇರಿಯ ಹಿರಿಯ ಕಲಾವಿದರಾದ ಅಂಬಳೆ ಸತ್ಯಪ್ರಸಾದ್ ಹಾಗೂ ಅಲಕಾ ನಂದಾ ದಂಪತಿಯ ಪುತ್ರರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಳಲು ವಾದನದ ಮೂಲಕ ಗಮನ ಸೆಳೆದಿರುವ ಸಹೋದರರ ಜೋಡಿ ಅನೇಕ ಪ್ರಶಸ್ತಿ, ಪಾರಿತೋಷಕಗಳನ್ನು ಪಡೆದಿದ್ದಾರೆ.

ಹಂಪಿ ಉತ್ಸವದಲ್ಲಿ ಒಟ್ಟು 11 ವೇದಿಕೆಗಳಲ್ಲಿ 450 ಕಾರ್ಯಕ್ರಮ ಗಳು ನಡೆಯುತ್ತಿರುವದು ವಿಶೇಷ. ಸ್ಥಳೀಯ ಹಾಗೂ ಅಂತರ ರಾಷ್ಟ್ರೀಯ ಕಲಾವಿದರು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದ್ದು, ಮಡಿಕೇರಿಯ ಸಹೋದರ ಕಲಾವಿದರಿಗೂ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿರುವದು ಹೆಮ್ಮೆಯ ವಿಚಾರ. ಈ ತಂಡದಲ್ಲಿ ಅಚ್ಚುತರಾವ್ ವಯೋಲಿನ್, ವಿನೋದ್ ಶ್ಯಾಮ್ ಮೃದಂಗ ಹಾಗೂ ಕೌಶಿಕ್ ಘಟಂ ನುಡಿಸುವ ಮೂಲಕ ಸಾಥ್ ನೀಡಿದರು.