ಮಡಿಕೇರಿ, ನ. 6: ಜಿಲ್ಲಾ ಪಂಚಾಯಿತಿಯ ನೂತನ ಕಟ್ಟಡ ಕಾಮಗಾರಿ ಮಳೆ ಕಾರಣದಿಂದ ವಿಳಂಬಗೊಂಡಿದ್ದು, ಮುಂದಿನ ದಿನಗಳಲ್ಲಿ ನಿಗದಿತ 18 ತಿಂಗಳ ಕಾಲ ಮಿತಿಯಲ್ಲಿ ಪೂರೈಸಲು ಪ್ರಯತ್ನಿಸ ಲಾಗುವದು ಎಂಬದಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಸ್ಪಷ್ಟಪಡಿಸಿದ್ದಾರೆ.ನಗರದ ಕರ್ಣಂಗೇರಿ ಗ್ರಾಮದ ವಿಶಾಲ 4.7 ಏಕರೆ ಜಾಗದಲ್ಲಿ ರೂ. 18 ಕೋಟಿ ಇಪ್ಪತ್ತೈದು ಲಕ್ಷ ವೆಚ್ಚದಲ್ಲಿ ಮೈಸೂರಿನ ಗಾದಿರಾಜ್ ಕನ್‍ಸ್ಟ್ರಕ್ಷನ್ ಉದ್ದಿಮೆಯಿಂದ ಕಾಮಗಾರಿ ಗುತ್ತಿಗೆ ಪಡೆದಿದ್ದು, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಮಳೆಯಲ್ಲಿ ಕೆಲಸ ಮುಂದುವರಿಸಿ ರಲಿಲ್ಲವೆಂದು ಅಭಿಯಂತರ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಜನ ಸಾಂದ್ರತೆಗೆ ಅನುಗುಣವಾಗಿ ಈ ನೂತನ ಜಿ.ಪಂ. ಕಟ್ಟಡಕ್ಕೆ ನೀಲಿ ನಕಾಶೆ ರೂಪಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಜಿ.ಪಂ. ಆಡಳಿತ ಕಚೇರಿಗಳ ಸಹಿತ ಕಲಾಪ ಸಭಾಂಗಣ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ನೆಲಮಳಿಗೆಗಳ ಸಹಿತ ಕಚೇರಿ ಕೆಲಸ ನಿರ್ವಹಿಸುವವರು, ಜನಪ್ರತಿನಿಧಿಗಳು, ಸಾರ್ವಜನಿಕರ ವಾಹನಗಳ ನಿಲುಗಡೆಗೆ ತೊಡಕಾಗದಂತೆ ನೆಲ ಅಂತಸ್ತಿಗೆ ಮುನ್ನ ವ್ಯವಸ್ಥೆ ರೂಪಿಸುವದರೊಂದಿಗೆ ಒಟ್ಟು ಮೂರು ಅಂತಸ್ತು ಕಟ್ಟಡ ನಿರ್ಮಾಣಗೊಳ್ಳಲಿರುವದಾಗಿ ಮಾಹಿತಿ ನೀಡಿದರು.

ಮಡಿಕೇರಿಯ ಕೋಟೆಯೊಳಗೆ ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕಚೇರಿ ಸಹಿತ ಇಂಜಿನಿಯರ್ ವಿಭಾಗ, ಲೆಕ್ಕಪತ್ರ ವಿಭಾಗ ಸೇರಿದಂತೆ ಎಲ್ಲವು ಶಿಥಿಲ ಗೊಂಡ ಪರಿಸ್ಥಿತಿಯಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸುಸಜ್ಜಿತ ಕಚೇರಿಯೊಂದಿಗೆ ನೂತನ ಕಟ್ಟಡದಲ್ಲಿ ಕಾರ್ಯಾರಂಭಗೊಳ್ಳಲಿದೆ.

ಆ ನಿಟ್ಟಿನಲ್ಲಿ ದೂರದೃಷ್ಟಿ ಯೊಂದಿಗೆ ವಿಶಾಲ ಆವರಣದಲ್ಲಿ ಎಲ್ಲ ಮೂಲಭೂತ

(ಮೊದಲ ಪುಟದಿಂದ) ಸೌಕರ್ಯ ದೊಂದಿಗೆ ನೂತನ ಜಿ.ಪಂ. ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಪ್ರಸಕ್ತ ಮಳೆಗಾಲ ದೂರಗೊಂಡಿರುವ ಬೆನ್ನಲ್ಲೆ ಕೆಲಸ ಚುರುಕುಗೊಳಿಸಲಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸುಳಿವು ನೀಡಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಅವರು ಶಕ್ತಿಯೊಂದಿಗೆ ಮಾಹಿತಿ ನೀಡುತ್ತಾ, ಪ್ರಸಕ್ತ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಕೈಗೊಳ್ಳಲಾಗುತ್ತಿದೆ. ಕಾಮಗಾರಿಯಲ್ಲಿ ಕಟ್ಟಡದ ಗುಣಮಟ್ಟ ಕಾಯ್ದು ಕೊಳ್ಳುವದ ರೊಂದಿಗೆ ಕಳಪೆ ಯಾಗದಂತೆ ನಿಗಾವಹಿಸಲಾಗುತ್ತಿದ್ದು, ಜನಪ್ರತಿನಿಧಿಗಳು ಕಾರ್ಯಪಾಲಕ ಅಭಿಯಂತರರ ಸಹಿತ ಆಗಿಂದಾಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂದಿನ 2018ರ ಆಗಸ್ಟ್ ವೇಳೆಗೆ ಸಂಬಂಧಪಟ್ಟವರು ಕಾಮಗಾರಿ ಪೂರ್ಣಗೊಳಿಸಿ ಜಿ.ಪಂ. ಸ್ವಾಧೀನಕ್ಕೆ ನೀಡಬೇಕಿದೆ ಎಂದು ಅವರು ತಿಳಿಸಿದರು.

ಚಿತ್ರ-ವರದಿ : ಪವನ್