ಮಡಿಕೇರಿ, ನ. 7: ಗೋಣಿಕೊಪ್ಪಲುವಿನ ಉಮಾಮಹೇಶ್ವರ ಬಡಾವಣೆ ನಿವಾಸಿ ಡಾ. ಪಿ. ಗೌರಮ್ಮ ಎಂಬವರ ಮನೆಗೆ ಕಳೆದ ಅಕ್ಟೋಬರ್ 17ರ ಬೆಳಗ್ಗಿನ ಜಾವದಲ್ಲಿ ಬೆಂಕಿ ಬಿದ್ದು, ಬೆಲೆ ಬಾಳುವ ವಸ್ತುಗಳು ಸುಟ್ಟು ಹೊಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಡಾ. ಗೌರಮ್ಮ ಅವರು ತಮ್ಮ ಬಂಧುಗಳ ಮನೆಗೆ ದುಬೈಗೆ ತೆರಳಿದ್ದು, ಅ. 16 ರಂದು ಬೆಂಗಳೂರಿಗೆ ವಾಪಾಸಾಗುವದರೊಂದಿಗೆ ಅ. 17ರಂದು ಮನೆಗೆ ಬಂದು ನೋಡುವಾಗ ಬೆಂಕಿ ಬಿದ್ದಿರುವದು ಗೋಚರಿಸಿದೆ.

ಈ ಸಂಬಂಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳ ಪರಿಶೀಲಿಸಿರುವ ಪೊಲೀಸ್ ಇಲಾಖೆ, ಅಗ್ನಿ ಶಾಮಕದಳ ಹಾಗೂ ಚೆಸ್ಕಾಂ ಅಧಿಕಾರಿಗಳು ಬೆಂಕಿ ಹೊತ್ತಿಕೊಂಡಿ ರುವ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವರದಿ ರವಾನಿಸಿದ್ದು, ಇನ್ನಷ್ಟೆ ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ. ಚೆಸ್ಕಾಂ ಮೂಲಗಳು ವಿದ್ಯುತ್‍ನಿಂದ ಅನಾಹುತ ಸಂಭವಿಸಿಲ್ಲ ಎಂಬ ನಿರ್ಧಾರ ತಳೆದಿದ್ದು, ಮನೆ ಮಾಲೀಕರು ಯಾರೋ ದುಷ್ಕರ್ಮಿ ಗಳು ಈ ಕೃತ್ಯ ಎಸಗಿರಬಹುದೆಂದು ಸಂಶಯದೊಂದಿಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.