ಮಡಿಕೇರಿ, ನ. 7: ರಾಜ್ಯ ಸರಕಾರದ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ನಗರಸಭೆ ಯಿಂದ ಜಾಗ ಗುರುತಿಸುವದ ರೊಂದಿಗೆ, ಸಂಬಂಧಿಸಿದ ನಿವೇಶನವನ್ನು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಖುದ್ದು ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿರುವ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು, ನಗರಸಭೆಯ ನಿವೇಶನವನ್ನು ಜಿಲ್ಲಾಡಳಿತ ಸೂಕ್ತವೆಂದು ಪರಿಗಣಿಸಿ ದರೆ ಅಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ಎಲ್ಲರಿಗೆ ಉಪಕಾರ ವಾಗಲಿದೆ ಎಂದು ಅಭಿಪ್ರಾಯಪಟ್ಟರು.ನಗರಸಭಾ ಆಯುಕ್ತೆ ಶುಭ ನಿವೇಶನದ ಬಗ್ಗೆ ಮಾಹಿತಿ ನೀಡುತ್ತಾ, ಈ ಹಿಂದೆ

(ಮೊದಲ ಪುಟದಿಂದ) ನಗರಸಭೆಯಿಂದ ನೆಲಬಾಡಿಗೆಗೆ ನೀಡಲಾಗಿದ್ದ ಖಾಲಿ ನಿವೇಶನವನ್ನು ಮರು ಸ್ವಾಧೀನಪಡಿಸಿಕೊಂಡು ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈಗಾಗಲೇ ನಗರದ ಮಂಗೇರಿರ ಮುತ್ತಣ್ಣ ವೃತ್ತದಿಂದ ಓಂಕಾರೇಶ್ವರ ದೇವಾಲಯ ಮಾರ್ಗಕ್ಕೆ ಹೊಂದಿಕೊಂಡಿರುವ ಈ ನಿವೇಶನ ವನ್ನು ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲಿಸಿ ಸಮ್ಮತಿ ವ್ಯಕ್ತಪಡಿಸಿ ದ್ದಾಗಿಯೂ ಮಾಹಿತಿ ನೀಡಿದರು.

ರಾಜ್ಯ ಸರಕಾರಕ್ಕೆ ತಾ. 8 ರೊಳಗೆ ನಗರಸಭೆಯಿಂದ ನಿವೇಶನ ಕಲ್ಪಿಸಬೇಕಿದ್ದ ಕಾರಣ, ಈ ನಿವೇಶನದಲ್ಲಿ ನೆಲಬಾಡಿಗೆ ನೀಡಿದ್ದ ಶೆಡ್‍ಗಳನ್ನು ತೆರವುಗೊಳಿಸಿ ಸ್ವಾಧೀನ ಪಡೆದುಕೊಂಡು ಈಗಾಗಲೇ ಸಮತಟ್ಟು ಮಾಡಲಾಗಿದೆ ಎಂದು ವಿವರಿಸಿದರು.

ಅಂದಾಜು 2000 ಅಡಿಗಳಷ್ಟು ಸುತ್ತಳತೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಲಿದ್ದು, ಸರಕಾರದ ಉದ್ದೇಶ ಪ್ರಕಾರ 1696 ಅಡಿಗಳಷ್ಟು ಸುತ್ತಳತೆಯ ನಿವೇಶನ ಸಾಕಾಗಲಿದೆ ಎಂದು ಮಾಹಿತಿ ನೀಡಿದರು.

ಇಂದಿರಾ ಕ್ಯಾಂಟೀನ್ ಯೋಜನೆಯ ಅನುಷ್ಠಾನವನ್ನು ಬೆಂಗಳೂರು ಹಂತದಲ್ಲೆ ರೂಪಿಸಲಿದ್ದು, ನಿವೇಶನವನ್ನು ಕಲ್ಪಿಸುವದಷ್ಟೇ ನಗರಸಭೆಯ ಜವಾಬ್ದಾರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿಗಳು ಮುಖ್ಯ ಮಂತ್ರಿಗಳೊಂದಿಗೆ ರಾಜಧಾನಿಯಲ್ಲಿ ಸಭೆಗೆ ತೆರಳಿರುವ ಹಿನ್ನೆಲೆ, ಪ್ರತಿಕ್ರಿಯೆಗೆ ಲಭಿಸಿಲ್ಲ.