ವೀರಾಜಪೇಟೆ, ನ. 7: ಕಳೆÀದ 6 ತಿಂಗಳ ಹಿಂದೆ ನಡೆದ ದರೋಡೆ ಯತ್ನದ ಇಬ್ಬರು ಆರೋಪಿಗಳಾದ ಜಿ.ಸವಿನ್ ಹಾಗೂ ಆಸ್ಗರ್ ಎಂಬಿಬ್ಬರನ್ನು ನಗರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ವಿವಿಧೆಡೆಗಳಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ಕಳೆದ 20-05-17ರಂದು ಇಲ್ಲಿನ ದಖ್ಖನಿ ಮೊಹಲ್ಲಾದ ನಿವಾಸಿ ಹಾಗೂ ಮಲಬಾರ್ ರಸ್ತೆಯ ಪೆಟ್ರೋಲ್ ಬಂಕ್‍ನ ವ್ಯವಸ್ಥಾಪಕ ಸುಭಾಷ್ ಎಂಬವರು ರೂ. ಎರಡು ಲಕ್ಷದ ನಗದು ಇರುವ ಪರ್ಸ್‍ನೊಂದಿಗೆ ಬೈಕ್‍ನಲ್ಲಿ ಮನೆಗೆ ಹೋಗುತ್ತಿರುವಾಗ ದಖ್ಖನಿ ಮೊಹಲ್ಲಾದ ತಿರುವಿನ ಬಳಿ ಬೈಕ್‍ನ್ನು ತಡೆದು ಕಣ್ಣಿಗೆ ಖಾರಪುಡಿ ಎರಚಿ ಪರ್ಸ್‍ನ್ನು ಕೀಳಲು ವಿಫಲ ಪ್ರಯತ್ನಗೊಂಡು ತಲೆ ಮರೆಸಿಕೊಂಡಿದ್ದವರನ್ನು ಖಚಿತ ಸುಳಿವಿನ ಮೇರೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಒಟ್ಟು 5ಮಂದಿ ಇದ್ದು, ಮೂವರು ತಲೆ ಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಇಬ್ಬರನ್ನು ಪೊಲೀಸರು ತನಿಖೆಗೊಳಪಡಿಸಿದಾಗ ಈ ತಂಡ ಅರಮೇರಿ ಹಾಗೂ ನಲ್ವತ್ತೊಕ್ಕಲು ಗ್ರಾಮಗಳಲ್ಲಿ ನಡೆದ ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣದಲ್ಲಿ ಭಾಗಿಯಾಗಿರುವದು ಗೊತ್ತಾಗಿದೆ.

ವೀರಾಜಪೇಟೆ ಡಿ.ವೈಎಸ್‍ಪಿ ನಾಗಪ್ಪ ಅವರ ಆದೇಶದ ಮೇರೆಗೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರುಗಳಾದ ಸಂತೋಷ್ ಕಶ್ಯಪ್, ಸುರೇಶ್ ಬೋಪಣ್ಣ, ಸಿಬ್ಬಂದಿಗಳಾದ ರಜನ್, ಮುನೀರ್, ಸುನಿಲ್, ನಂಜಪ್ಪ ಭಾಗವಹಿಸಿದ್ದರು.