ಮಡಿಕೇರಿ, ನ. 9: ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ಅಂಗನವಾಡಿಯಲ್ಲಿ ಕರ್ತವ್ಯ ಲೋಪದ ಆರೋಪ ಎದುರಿಸುತ್ತಿರುವ ಕಾಯಕರ್ತೆಯನ್ನು ಮುಂದಿನ 15 ದಿನಗಳ ಒಳಗಾಗಿ ವರ್ಗಾವಣೆ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಗ್ರಾ.ಪಂ. ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಬಿದ್ರುಪಣೆ, ಅಂಗನವಾಡಿ ಕಾರ್ಯಕರ್ತೆಯನ್ನು ವರ್ಗಾಯಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಪ್ರಸ್ತುತ ಕಾರ್ಯಕರ್ತೆಯ ವರ್ತನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಎಂ. ಬೋಜಿ ಮಾರಕ್ಕ, ಸದಸ್ಯರುಗಳಾದ ಮುಂಡೋಡಿ ನಂದಾ ನಾಣಯ್ಯ, ಕಳ್ಳೀರ ಹರೀಶ್, ಗ್ರಾಮಸ್ಥರಾದ ಸಿರಾಜ್ ಹಾಗೂ ಮುರಳೀಧರ್ ಉಪಸ್ಥಿತರಿದ್ದರು.