ಮಡಿಕೇರಿ, ನ. 9: ಮಾರ್ಪಡ್ಕ ಯುವ ಸಂಘದ ವತಿಯಿಂದ ದೀಪಾವಳಿಯ ಪ್ರಯುಕ್ತ ‘ದೀಪಾವಳಿಗೊಂಜಿ ಗೌಜಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಉದ್ಘಾಟಕರಾಗಿದ್ದ ಚೆಂಬು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಕಾರ್ಯಕ್ರಮವನ್ನು ಪಟಾಕಿ ಹಚ್ಚುವ ಮೂಲಕ ನೆರವೇರಿಸಿ, ಶುಭ ಹಾರೈಸಿದರು. ಅಂಗನವಾಡಿ ಕಾರ್ಯಕರ್ತೆ ಗೋಪಮ್ಮ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಗೌರವ ಅಧ್ಯಕ್ಷ ನಾಗಪ್ಪ, ಮುಖ್ಯ ಅತಿಥಿಯಾಗಿ ರಾಘವ ಮತ್ತು ರಮ್ಯ ಕಾರ್ಯಕ್ರಮಕ್ಕೆ ಶುಭಕೋರಿದರು. ಮಾರ್ಪಡ್ಕ ಯುವ ಸಂಘದ ಅಧ್ಯಕ್ಷೆ ವಾಣಿಶ್ರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಮೋನಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು. ಸಂಘದ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಯಿತು. ದಾನಿಗಳಾಗಿ ಯಶವಂತ ನಾರಾಲು ಮತ್ತು ದಿನೇಶ್ ಸಣ್ಣಮನೆ ಸಹಕರಿಸಿದರು. ಮಾರ್ಪಡ್ಕ ಯುವ ಸಂಘದ ವತಿಯಿಂದ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ದಂಪತಿಗಳಿಗೆ ಏರ್ಪಡಿಸಲಾದ ಬಲೂನು ಪಾಸ್ ಮಾಡುವ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಹಗ್ಗಜಗ್ಗಾಟ, ಕ್ರಿಕೆಟ್, ಬಾಟಲಿಗೆ ನೀರು ತುಂಬಿಸುವದು, ಪಟ್ಟಣಕ್ಕೆ ಬಾಂಬ್, ಸಂಗೀತ ಕುರ್ಚಿ, ಕಾಳು ಹೆಕ್ಕುವದು, ತೆಂಗಿನ ಕಾಯಿಗೆ ಗುರಿ, ಬಕೆಟ್‍ಗೆ ಬಾಲ್ ಹಾಕುವದು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಅಶ್ವಿನಿ ಸ್ವಾಗತ ಭಾಷಣ ಮಾಡಿ, ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.