ಶ್ರೀಮಂಗಲ, ನ. 13: ತಲಚೇರಿ-ಮೈಸೂರಿಗೆ ಕೊಡಗು ಜಿಲ್ಲೆಯ ದ.ಕೊಡಗಿನ ಮುಖಾಂತರ ಹಾದು ಹೋಗುವ ರೈಲು ಮಾರ್ಗ ಸರ್ವೇ ಕಾರ್ಯವನ್ನು ತಕ್ಷಣ ನಿಲ್ಲಿಸುವಂತೆ ಹಾಗೂ ಈ ಸರ್ವೇ ಕಾರ್ಯ ನಡೆಯದಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲಾ ರಾಜಕೀಯ ಪಕ್ಷದ ಪ್ರಮುಖರು ಮುಂದಾಗುವಂತೆ ರೈಲ್ವೆ ಮಾರ್ಗ ಸರ್ವೇ ಕಾರ್ಯ ನಿಲ್ಲಿಸಲು ಆಗ್ರಹ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಮುತ್ತಣ್ಣ ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಆರ್.ಸೀತಾರಾಮ್ ಅವರು ಜಿಲ್ಲಾ ಬೆಳೆಗಾರರ ಅಸೋಸಿಯೇಷನ್ ಸಭೆಯಲ್ಲಿ ಕೊಡಗು ಜಿಲ್ಲೆಯ ಮುಖಾಂತರ ಯಾವದೇ ರೈಲ್ವೆ ಯೋಜನೆಯನ್ನು ಮಾಡಲು ಬಿಡುವದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರದ ಮತ್ತು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭೆ ಸೇರಿ ಯೋಜಿತ ತಲಚೇರಿ, ಮೈಸೂರು ಕಾಮಗಾರಿಗೆ ಸರ್ವೇ ಕಾರ್ಯ ಮಾಡುವ ನಿಟ್ಟಿನಲ್ಲಿ ಅಂಕಿತವನ್ನು ಹಾಕಿರುವದು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಈ ಯೋಜನೆ ತಯಾರಿ ನಡೆಸಿರುವದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಈ ಯೋಜನೆಯನ್ನು ತಡೆಹಿಡಿಯುವಂತೆ ಆಗ್ರಹಿಸಿದ್ದಾರೆ.