ಅರುಣ್ ಮಾಚಯ್ಯ

*ಗೋಣಿಕೊಪ್ಪಲು, ನ. 14: ಮಾಯಮುಡಿಯಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಪೊನ್ನಂಪೇಟೆ ಪಿಸಿಬಿ ತಂಡ ಹಾತೂರು ವಿರಾಟ್ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಪಂದ್ಯಾವಳಿಯನ್ನು ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಕ್ರೀಡೆ ಮಾನಸಿಕ ಮತ್ತು ದೈಹಿಕ ಸಮತೋಲವನ್ನು ಕಾಪಾಡುತ್ತದೆ. ಆರೋಗ್ಯಕರ ಮನಸ್ಸಿಗೆ ಕ್ರೀಡೆ ಸಹಕಾರಿಯಾಗಲಿದೆ. ಯುವಜನತೆ ತಮಗೆ ಇಷ್ಟವಾದ ಕ್ರೀಡೆಯಲ್ಲಿ ಪಾಲ್ಗೊಂಡು ಸಮಾಜ ಮುಖಿಯಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪೃಥ್ಯು ಮಾತನಾಡಿ, ಯುವ ಜನಾಂಗಕ್ಕೆ ಕ್ರೀಡೆ ಉತ್ತಮ ಹವ್ಯಾಸವಾಗಿದೆ. ಇದರಿಂದ ಸಮಾಜದ ಆರೋಗ್ಯವೂ ವೃದ್ಧಿಯಾಗಲಿದೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಧರ್, ಚೆಂಡೀರ ಚಿಣ್ಣಪ್ಪ, ಪಂದ್ಯಾವಳಿ ಆಯೋಜಕರಾದ ಅಭಿಜಿತ್, ಮನೋಜ್, ಅಕ್ಷಯ್ ಹಾಜರಿದ್ದರು.