ಆಲೂರುಸಿದ್ದಾಪುರ, ಒಡೆಯನಪುಡಿ, ನ. 15: ಬಿಜೆಪಿ ಎಂಎಲ್‍ಸಿ ಗೋ. ಮಧುಸೂಧನ್ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಭಾರತ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವದನ್ನು ಖಂಡಿಸಿ ಕೊಡ್ಲಿಪೇಟೆಯ ಜೈಭೀಮ್ ಯುವ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂವಿಧಾನ ಮತ್ತು ಅಂಬೇಡ್ಕರ್ ವಿರುದ್ಧವಾಗಿ ಬಿಜೆಪಿ ಎಂಎಲ್‍ಸಿ ಗೊ. ಮಧುಸೂಧನ್ ಅವಹೇಳನವಾಗಿ ಮಾತನಾಡಿರುವದು ಭಾರತದ ಸಂವಿಧಾನದ ಬಗ್ಗೆಯೆ ಅವಹೇಳನ. ಮಧುಸೂಧನ್ ಭಾರತದ ಸಂವಿಧಾನಕ್ಕೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತಾಗಿದೆ ಎಂದು ಪ್ರತಿಭಟನೆಕಾರರು ಗೊ. ಮಧುಸೂಧನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಪ್ರತಿಭಟನೆಗಾರರು ಕೊಡ್ಲಿಪೇಟೆ ಕಡೆಪೇಟೆ ಜಂಕ್ಸನ್‍ನಿಂದ ಶಾಸಕ ಗೊ.ಮಧುಸೂಧನ್ ಅವರ ಅಣುಕು ಶವಯಾತ್ರೆ ನಡೆಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ದಹನ ಮಾಡಿದರು. ನಂತರ ಪ್ರತಿಭಟನೆಗಾರರನ್ನುದ್ದೇಶಿಸಿ ಪ್ರಮುಖರಾದ ನಿರ್ವಾಣಪ್ಪ, ಸೋಮಣ್ಣ, ವಸಂತ್, ಪ್ರಸನ್ನ ಮಾತನಾಡಿದರು. ಈ ಬಗ್ಗೆ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೊಡ್ಲಿಪೇಟೆ ಆರ್‍ಐ ದೇವರಾಜ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಜಗದೀಶ್, ಹಮೀದ್, ಶಾನು, ರಿಜ್ಜು, ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.