ಕುಶಾಲನಗರ, ನ. 16: ಕುಶಾಲನಗರ ಪಟ್ಟಣ ಪಂಚಾಯಿತಿಯ ನೂತನ ವಾಣಿಜ್ಯ ಸಂಕೀರ್ಣ ಯೋಜನೆಗೆ ಅಂತಿಮ ಹಂತದ ತಯಾರಿಗಳು ನಡೆಯುತ್ತಿದ್ದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರ ಸಂಜೆ ಕುಶಾಲನಗರಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರೊಂದಿಗೆ ಮಾಹಿತಿ ಸಂಗ್ರಹಿಸಿ ಸ್ಥಳ ಪರಿಶೀಲನೆ ಕೈಗೊಂಡರು.

ಆದಷ್ಟು ಬೇಗನೆ ಯೋಜನೆಯ ರೂಪುರೇಷೆ ಅಂತಿಮಗೊಳಿಸಿ ಕಾಮಗಾರಿಗೆ ಚಾಲನೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಕುಶಾಲನಗರ ಗುಂಡೂರಾವ್ ಬಡಾವಣೆಯ ಎರಡನೇ ಹಂತದ ನಿವೇಶನ ಹರಾಜು ಪ್ರಕ್ರಿಯೆಗೆ ಸರಕಾರ ಹಸಿರು ನಿಶಾನೆ aತೋರಿಸಿದ್ದು ಸಧ್ಯದಲ್ಲಿಯೇ ಉಳಿದ ನಿವೇಶನಗಳ ಬಹಿರಂಗ ಹರಾಜು ನಡೆಯಲಿದೆ. ಬಡ ಮತ್ತು ಮಧ್ಯಮ ವರ್ಗದ ನಿವೇಶನ ರಹಿತರಿಗೆ ಕೂಡ ಬಡಾವಣೆಯಲ್ಲಿ ನಿವೇಶನ ನೀಡಲು ಜಿಲ್ಲಾಧಿಕಾರಿಗಳು ಕ್ರಮಕೈಗೊಂಡಿದ್ದಾರೆ.

ಈ ಸಂದರ್ಭ ಪಂಚಾಯಿತಿ ಅಭಿಯಂತರರಾದ ಶ್ರೀದೇವಿ, ಅಧಿಕಾರಿ ಸತೀಶ್ ಮತ್ತಿತರರು ಇದ್ದರು.