ಬೆಂಗಳೂರು, ನ. 16: “ಬೆಂಗಳೂರಿನಲ್ಲಿ ನಡೆಯುತ್ತಿದ್ದ ಖಾಸಗಿ ವೈದ್ಯರ ಪ್ರತಿಭಟನೆಯನ್ನು ನಿಲ್ಲಿಸಿದ್ದೇವೆ. ಶುಕ್ರವಾರ ಅಂದರೆ ತಾ. 17ರಂದು ಬೆಳಿಗ್ಗೆಯಿಂದ ಒಪಿಡಿ ಸೇವೆ ಆರಂಭವಾಗಲಿದೆ” ಎಂದು ಪ್ರೈವೇಟ್ ಹಾಸ್ಪಿಟಲ್ಸ್ ಅಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(ಫನಾ) ಅಧ್ಯಕ್ಷ ಸಿ.ಜಯಣ್ಣ ಬೆಂಗಳೂರಿನಲ್ಲಿ ಹೇಳಿದ್ದಾರೆ. ಮುಷ್ಕರ ಹಿಂತೆಗೆದು ಕೊಳ್ಳುವಂತೆ ಹೈಕೋರ್ಟ್ ನೀಡಿದ ಸಲಹೆ ಬಳಿಕ ಈ ಬೆಳವಣಿಗೆ ನಡೆದಿದೆ. ಅಲ್ಲದೆ ಈ ಎಲ್ಲ ಬೆಳವಣಿಗೆ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಮತ್ತಿತರ ಸಚಿವರೊಂದಿಗೆ ಚರ್ಚಿಸಿ ವ್ಯೆದ್ಯಕೀಯ ವಿಧೇಯಕದಲ್ಲಿ ವೈದ್ಯರುಗಳಿಗೆ ಹಾನಿಕಾರಕವಾಗುವ ಅಂಶಗಳÀನ್ನು ತೆಗೆದು ಹಾಕಿ ಬೆಳಗಾವಿ ಅಧಿವೇಶನದಲ್ಲಿ ಸದನದಲ್ಲಿ ಸೋಮವಾರ ದಿನ ಮಂಡಿಸಲು ನಿರ್ಧರಿಸಿದ್ದು ಈ ಕುರಿತು ಐಎಂಎ ಸಂಸ್ಥೆಯೊಂದಿಗೆ ಶುಕ್ರವಾರ ಚರ್ಚಿಸಲಿದ್ದಾರೆ.

ಫನಾ ಅಧ್ಯಕ್ಷ ಸಿ.ಜಯಣ್ಣ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರಕಾರದ ಮನವಿಗೆ ಸ್ಪಂದಿಸಿ ಹಾಗೂ ಜನರಿಗಾಗುತ್ತಿರುವ ತೊಂದರೆಯನ್ನು ಗಮನಿಸಿ, ಹೈಕೋರ್ಟ್ ನೀಡಿದ ಸಲಹೆಗ ಮಾನ್ಯತೆ ನೀಡಿ ತಕ್ಷಣದಿಂದಲೇ ಬೆಂಗಳೂರಿನಲ್ಲಿ ನಡೆಸುತ್ತಿರುವ ವೈದ್ಯರ ಮುಷ್ಕರ ಸ್ಥಗಿತಗೊಳಿಸಿದ್ದೇವೆ. ಜತೆಗೆ ಶುಕ್ರವಾರ ಬೆಳಿಗ್ಗೆಯಿಂದ ಒಪಿಡಿ ಕಾರ್ಯಾರಂಭ ಮಾಡಲಿದೆ ಎಂದರು.

ಆದರೆ, ಭಾರತೀಯ ವ್ಯದ್ಯಕೀಯ ಸಂಸ್ಥೆಯ (ಐಎಂಎ) ರಾಜ್ಯ ಘಟಕದ ಅಧ್ಯಕ್ಷ ಡಾ. ಹೆಚ್.ಎನ್ ರವೀಂದ್ರ ಅವರು ಈ ಬಗ್ಗೆ ಒಪ್ಪ್ಪಿಗೆ ನೀಡಿಲ್ಲ. ಬೆಳಗಾವಿಯಲ್ಲಿ ಮುಷ್ಕರ ನಿರತ ರೊಂದಿಗೆ ಸಹಭಾಗಿಯಾಗಿರುವ ಅವರು ಮುಷ್ಕರ ನಿಲ್ಲಿಸಲು ಕೋರಿ ಫನಾ ಸಂಸ್ಥೆಯ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮುಷ್ಕರ ಹಿನ್ನೆಲೆಯಲ್ಲಿ ಸಂಘಟನೆಗಳ ನಡುವೆ ಏರ್ಪಟ್ಟ ಈ ಭಿನ್ನಮತದಿಂದ ಬೇಸರಗೊಂಡ ಅವರು ವೈದ್ಯರುಗಳಿಗೆ ಕಳುಹಿಸಿದ ಸಂದೇಶ ಹೀಗಿದೆ: ”ಈಗ ಮುಷ್ಕರ ನಿರತರಾಗಿರುವ

(ಮೊದಲ ಪುಟದಿಂದ) ವೈದ್ಯರು ಸಾಯುವವರೆಗೂ ಹೋರಾಡುತ್ತೇವೆ ಎಂದು ಸಂಕಲ್ಪವನ್ನು ಹೊಂದಿರುವ ಸ್ಥಿತಿಯಲ್ಲಿ ನೀವು ಕೆಲಸಕ್ಕೆ ಹಾಜರಾಗುವÀ ಬಗ್ಗೆ ನಿಮ್ಮ ಮನಸ್ಸಾಕ್ಷಿ ಒಪ್ಪಿದರೆ ನೀವು ಹಾಗೆ ಮುಂದುವರಿಯಹುದು., ಕೆಲಸಕ್ಕೆ ಹಾಜರಾಗಬಹುದು. ಹಾಗಿಲ್ಲದಿದ್ದಲ್ಲಿ ನೀವು ನಮ್ಮೊಂದಿಗೆ ಸೇರಿ ಬೆಂಬಲ ನೀಡಿ” ಎಂದು ರವೀಂದ್ರ ತಮ್ಮ ಅಭಿಪ್ರಾಯ ಪ್ರಕಟಿಸಿ ಬೆಳಗಾವಿಯ ಮುಷ್ಕರ ನಿರತ ಸ್ಥಳದಿಂದ ತಮ್ಮ ವಾಸ್ತವ್ಯದ ಸ್ಥಳಕ್ಕೆ ರಾತ್ರಿ ಹಿಂತೆರಳಿದ್ದಾರೆ.

ಕೊಡಗಿನಲ್ಲಿ ತಾ. 17 (ಇಂದು) ರಿಂದ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಬೇಕೆಂದು ಈ ಹಿಂದೆ ಐಎಂಎ ಸಂಸ್ಥೆ ಪರವಾಗಿ ಕೊಡಗು ಘಟಕದ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಕರೆ ನೀಡಿದ್ದರೂ ಇದೀಗ ರಾಜ್ಯ ಮಟ್ಟದಲ್ಲಿ ಕಂಡು ಬಂದ ಹೊಸ ಬೆಳವಣಿಗೆಯಿಂದ ಗೊಂದಲ ಮೂಡಿದ್ದು ಅಂತಿಮವಾಗಿ ತಡ ರಾತ್ರಿವರೆಗೂ ಸ್ಪಷ್ಟ ನಿಲುವು ಹೊರಬಿದ್ದಿಲ್ಲ. ಕೊಡಗಿನ ಬಹುತೇಕ ಆಯಾ ಖಾಸಗಿ ಆಸ್ಪತ್ರೆÉಗಳು, ಕ್ಲಿನಿಕ್‍ಗಳ ವೈದ್ಯರುಗಳು ತಮ್ಮ ಸ್ವಂತ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ನಡುವೆ ಖಾಸಗಿ ವೈದ್ಯರ ಮುಷ್ಕರ ಸಮಸ್ಯೆ ಬಗೆಹರಿಯದಿದ್ದರೆ ಮಧ್ಯಪ್ರವೇಶಿಸುವದಾಗಿ ಹೈಕೋರ್ಟ್ ಮುನ್ಸೂಚನೆ ನೀಡಿದೆ.

ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸುತ್ತಿರುವ ಮುಷ್ಕರದ ಸಮಸ್ಯೆ ಬಗೆಹರಿಯದಿದ್ದರೆ ಮಧ್ಯಪ್ರವೇಶ ಮಾಡುವದಾಗಿ ಕರ್ನಾಟಕ ಹೈಕೋರ್ಟ್ ಗುರುವಾರ ಸ್ಪಷ್ಟಪಡಿಸಿದೆ.

(ಕೆಪಿಎಂಇ) ಕಾಯ್ದೆ ವಿರೋಧಿಸಿ ಖಾಸಗಿ ವೈದ್ಯರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್. ಈ. ರಮೇಶ್ ಹಾಗೂ ನ್ಯಾಯಾಧೀಶ ಪಿ.ಎಸ್. ದಿನೇಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಮತ್ತು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಾತುಕತೆ ನಡೆಸಿವೆಯೇ? ಎಂದು ಅಡ್ವೋಕೇಟ್ ಜನರಲ್ ಅವರಿಗೆ ಪ್ರಶ್ನಿಸಿದೆ.

ವೈದ್ಯರ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ವೈದ್ಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ. ಇಲ್ಲದಿದ್ದರೆ ಕೋರ್ಟ್ ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದು ವಿಭಾಗೀಯ ಪೀಠ ಹೇಳಿದೆ.

ವೈದ್ಯರ ಮುಷ್ಕರ ಪ್ರಶ್ನಿಸಿ ವಕೀಲ ಅಮೃತೇಶ್ ಹಾಗೂ ನೆಲಮಂಗಲದ ಆದಿನಾರಾಯಣ ಶೆಟ್ಟಿ ಅವರುಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.