ಸೋಮವಾರಪೇಟೆ,ನ.16: ಮೇಯಲು ಬಿಟ್ಟಿದ್ದ ಮೂರು ಜಾನುವಾರುಗಳನ್ನು ಕಳ್ಳತನ ಮಾಡಿರುವ ಘಟನೆ ಪಟ್ಟಣಕ್ಕೆ ಸಮೀಪದ ನಗರೂರು ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರೂರು ಗ್ರಾಮದ ಮಲ್ಲ ಅವರಿಗೆ ಸೇರಿದ ಎರಡು ಜಾನುವಾರುಗಳನ್ನು ಸಮೀಪದ ಗದ್ದೆಯಲ್ಲಿ ಮೇಯಲು ಬಿಡಲಾಗಿದ್ದ ಸಂದರ್ಭ ಕಳ್ಳರು ಗೋ ಸಾಗಾಟ ಮಾಡಿದ್ದಾರೆ. ಇತ್ತೀಚೆಗಷ್ಟೇ ಕರುವಿಗೆ ಜನ್ಮ ನೀಡಿದ್ದ ಹಸುವನ್ನು ಕಳ್ಳರು ಕದ್ದೊಯ್ದಿರುವದರಿಂದ ಒಂದು ತಿಂಗಳ ಕರು ಮೂಕ ರೋಧನ ಅನುಭವಿಸುತ್ತಿದೆ.

ಮಲ್ಲ ಅವರಿಗೆ ಸೇರಿದ ಎರಡು ಜಾನುವಾರುಗಳು ಕಳುವಾಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದು, ಸುಮಾರು 25 ಸಾವಿರ ಮೌಲ್ಯದ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಇದರೊಂದಿಗೆ ಐ.ಬಿ. ರಸ್ತೆಯ ಕೃಷ್ಣ ಎಂಬವರಿಗೆ ಸೇರಿದ ಜಾನುವಾರನ್ನೂ ಸಹ ಕಳವು ಮಾಡಲಾಗಿದೆ.

ಗರ್ಭ ಧರಿಸಿದ್ದ ಹಸುವನ್ನು ಆಂಜನೇಯ ದೇವಾಲಯದ ಬಳಿ ಇರುವ ಗದ್ದೆಯಲ್ಲಿ ಮೇಯಲು ಕಟ್ಟಿ ಹಾಕಲಾಗಿತ್ತು. ಹಗ್ಗವನ್ನು ಕತ್ತರಿಸಿ ಗೋವನ್ನು ಕಳ್ಳರು ಸಾಗಾಟ ಮಾಡಿದ್ದು, ಸುಮಾರು 12 ಸಾವಿರ ಮೌಲ್ಯದ ಜಾನುವಾರನ್ನು ಕಳೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.