ವೀರಾಜಪೇಟೆ, ನ. 19: ಬೊಳ್ಳುಮಾಡು ಗ್ರಾಮದ ಚಿಟ್ಟಿಯಪ್ಪ ಎಂಬವರು ಕುಂಜಿಲಗೇರಿ ಗ್ರಾಮದ ಎಂ. ಅನಿಲ್ (40) ಎಂಬವರಿಗೆ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆ ಗ್ರಾಮಾಂತರ ಪೊಲೀಸರು ಚಿಟ್ಟಿಯಪ್ಪನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.

ನಿನ್ನೆ ಸಂಜೆ 6.45ರ ಸಮಯದಲ್ಲಿ ಬೊಳ್ಳುಮಾಡು ಗ್ರಾಮದಲ್ಲಿ ಘಟನೆ ನಡೆದಿದ್ದು, ಮಾರಣಾಂತಿಕ ಹಲ್ಲೆಯಿಂದ ರಕ್ತಸ್ರಾವ ಅಧಿಕವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅನಿಲ್‍ನನ್ನು ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಂಗಳೂರಿಗೆ ಸಾಗಿಸಲಾಗಿದೆ.

ಚಿಟ್ಟಿಯಪ್ಪ ಹಾಗೂ ಅನಿಲ್ ನಡುವೆ ಹಣದ ಲೇವಾದೇವಿ ಇದ್ದು, ಈ ವಿಚಾರದಲ್ಲಿ ಇಬ್ಬರ ನಡುವೆ ವಿವಾದ ಉಂಟಾಗಿ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ.