ಶನಿವಾರಸಂತೆ, ನ. 21: ಪಟ್ಟಣದ ಚಂದ್ರಮೌಳೇಶ್ವರ - ಪಾರ್ವತಿ-ಗಣಪತಿ ದೇವಾಲಯದಲ್ಲಿ ಇತ್ತೀಚೆಗೆ ಲಕ್ಷ ದೀಪೋತ್ಸವ ಪ್ರಯುಕ್ತ ವಿಶೇಷ ದೀಪಾರಾಧನೆ ನಡೆಯಿತು.

ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ, ಪಾರ್ವತಿ ದೇವಿಗೆ ಕುಂಕುಮಾರ್ಚನೆ, ಗಣಪತಿಗೆ ಸುವರ್ಣಾಲಂಕಾರ ಮಾಡಿ ಪೂಜಿಸಲಾಯಿತು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅರ್ಚಕ ಮಾಲತೇಶ್ ಭಟ್ ಹಾಗೂ ಶೇಷಾಚಲ ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು. ದೇವಾಲಯ ಪ್ರಾಂಗಣ ಹಾಗೂ ಆವರಣದಲ್ಲಿ ಭಕ್ತರು ಲಕ್ಷ ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು. ಪೂಜೆ, ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಬಳಿಕ ನಡೆದ ಸಿಡಿಮದ್ದು ಪ್ರದರ್ಶನ ಆಕಾಶದಲ್ಲಿ ಚಿತ್ತಾರ ಮೂಡಿಸಿ ಜನಮನ ರಂಜಿಸಿತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಶರತ್ ಶೇಖರ್, ಪದಾಧಿಕಾರಿಗಳಾದ ಎನ್.ಪಿ. ರವಿ, ಜಿ.ಬಿ. ಕುಮಾರ್, ಪ್ರದೀಪ್, ಧನಂಜಯ್, ಎನ್.ಬಿ. ರವಿ, ಮಹೇಶ್, ಸಂತೋಷ್, ಪ್ರಕಾಶ್ ಇತರರು ಹಾಜರಿದ್ದರು.