ಶನಿವಾರಸಂತೆ, ನ. 22: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆಯ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಎಂ.ಪಿ. ಸಂಪತ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ಧಾಳಿ ನಡೆಸಿದ ಪ್ರಕರಣ ಅಬಕಾರಿ ಇಲಾಖೆಯಲ್ಲಿ ದಾಖಲಾಗಿದೆ.

ಮಾದ್ರೆ ಗ್ರಾಮದ ನಿವಾಸಿ ಸುರೇಶ್ ಎಂ.ಎನ್. ಅವರ ಮನೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಾರೆ ಎಂಬ ಸುಳಿವಿನ ಮೇರೆ ಅಬಕಾರಿ ಇಲಾಖೆ ಧಾಳಿ ನಡೆಸಿ 10 ಲೀಟರ್ ಪುಳಗಂಜಿ, 2 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡು ಆರೋಪಿ ಸುರೇಶ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾಚರಣೆ ಯಲ್ಲಿ ಅಬಕಾರಿ ಅಧೀಕ್ಷಕ ಎಂ.ಪಿ. ಸಂಪತ್ ಕುಮಾರ್, ಅಬಕಾರಿ ಉಪ ನಿರೀಕ್ಷಕಿ ಎ.ಆರ್. ಅಪೂರ್ವ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.