ಜಿಲ್ಲೆಯಲ್ಲಿ ಕಾಫಿಗೆ ಶಂಖು ಹುಳುವಿನ ಬಾಧೆ ಬೆಳೆಗಾರರಿಗೆ ತಲೆನೋವಾಗಿದೆ. ಶಂಖು ಹುಳುಗಳನ್ನು ತೋಟಗಳಿಂದ ಹಿಡಿಯಲು ಗುತ್ತಿಗೆ ನೀಡುವ ಅನಿವಾರ್ಯತೆ ತಲೆದೋರಿದೆ. ಈ ನಡುವೆ ಭತ್ತವನ್ನು ಕಷ್ಟಪಟ್ಟು ಬೆಳೆದು ಇನ್ನೇನು ಕಟಾವು ಮಾಡಬೇಕು ಎನ್ನುವ ಈ ಸಂದರ್ಭ ಕೊಡಗು ಜಿಲ್ಲೆಯಾದ್ಯಂತಹ ಭತ್ತದ ಬೆಳೆಗೆ ಸೈನಿಕ ಹುಳು ಎಂಬ ಕೀಟದ ಬಾಧೆಯು ತೀವ್ರವಾಗಿ ಕಾಣಿಸಿಕೊಂಡಿದ್ದು ಜಿಲ್ಲೆಯ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಕೀಟವು ಬೆಳೆದು ನಿಂತ ಭತ್ತದ ತೆನೆ ಮತ್ತು ಕಾಂಡವನ್ನು ತುಂಡರಿಸಿ ಕೆಳಗೆ ಬೀಳಿಸುತ್ತಿದೆ. ಈ ಕೀಟವು ರಾತ್ರಿ ವೇಳೆಯಲ್ಲಿ ಕ್ರೀಯಾಶೀಲವಾಗಿದ್ದು ತೆನೆಯನ್ನು ಕತ್ತರಿಸುವ ಕಾರ್ಯ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಕಂಡುಬರುತ್ತದೆ. ಹಗಲಿನ ಹೊತ್ತಿನಲ್ಲಿ ಈ ಕೀಟದ ಕಾರ್ಯಚಟುವಟಿಕೆ ಕಣ್ಣಿಗೆ ಕಾಣದಂತಾಗಿ ರೈತರಲ್ಲಿ ಆತಂಕ ಪಡುವ ಪರಿಸ್ಥಿಯನ್ನು ಈ ಕೀಟವು ತಂದಿದೆ. ಆದ್ದರಿಂದ ಈ ಕೀಟದ ಹತೋಟಿಗೆ ಈ ಕೆಳಗೆ ತಿಳಿಸಿರುವ ಯಾವುದಾದರು ಒಂದು ಕ್ರಮವನ್ನು ಅನುಸರಿಸಿ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್‍ರವರು ತಿಳಿಸಿದ್ದಾರೆ.

ಹತೋಟಿ ಕ್ರಮಗಳು

ಈ ಕೀಟದ ಭಾದೆಯಿರುವ ಗದ್ದೆಗಳಿಗೆ ಸಂಜೆ ವೇಳೆಯಲ್ಲಿ ಅಂದರೆ ಸಾಯಂಕಾಲ 5.30ರ ನಂತರ ಕ್ಲೋರೊಪೈರಿಫಾಸ್ + ಸೈಪರ್‍ಮೆತ್ರಿನ್ (ಆಮ್ಲಾ) ಎಂಬ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ 2.0 ಮಿ.ಲಿ. ಯಂತೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಸಿಂಪರಣೆಯನ್ನು ಕಡ್ಡಾಯವಾಗಿ ಸಂಜೆ ಹೊತ್ತಿನಲ್ಲಿಯೇ ಮಾಡಬೇಕು.

ವಿಷ ಮಿಶ್ರಣ ತಯಾರಿಸಿ ಕೀಟವನ್ನು ಹತೋಟಿ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು

v 50 ಕೆ.ಜಿ ಭತ್ತದ ತೌಡು

v 5 ಕೆ.ಜಿ ಬೆಲ್ಲ

v 10 ಲೀ. ನೀರು

ತಯಾರಿಸುವ ವಿಧಾನ

50 ಕೆ.ಜಿ. ಭತ್ತದ ತೌಡನ್ನು ತೆಗೆದುಕೊಂಡು ಅದಕ್ಕೆ 5 ಕೆ.ಜಿ. ಬೆಲ್ಲವನ್ನು 5 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ತಯಾರಿಸಿದ ಪಾಕವನ್ನು ಸೇರಿಸಬೇಕು. ನಂತರ ಅದಕ್ಕೆ 10 ಲೀಟರ್ ನೀರಿನೊಡನೆ ಮಿಶ್ರಣ ಮಾಡಿ 12 ಗಂಟೆಗಳ ಕಾಲ ನೆನೆಸಿಟ್ಟು, ನಂತರ ಅದಕ್ಕೆ 600 ಮಿ.ಲಿ. ಮೋನೋಕ್ರೋಟೊಫಾಸ್ ಎಂಬ ಕೀಟನಾಶಕವನ್ನು ಸೇರಿಸಿ ಮಿಶ್ರಣ ಮಾಡಿದ ಪುಡಿಯನ್ನು ಸಂಜೆ ವೇಳೆಯಲ್ಲಿ (5.30 ನಂತರ) ಗದ್ದೆಗೆ ಎರಚಬೇಕು. ಇದರಿಂದ ಸೈನಿಕ ಹುಳುಗಳು ಈ ವಿಷಮಿಶ್ರಿತ ಅಹಾರಕ್ಕೆ ಆಕರ್ಷಣೆಗೊಂಡು ಅದನ್ನು ತಿಂದು ಸಾಯುತ್ತವೆ. ಆದ್ದರಿಂದ ಜಿಲ್ಲೆಯ ರೈತರುಗಳು ಈ ಮೇಲೆ ತಿಳಿಸಿದ ಯಾವದಾದರು ಒಂದು ಹತೋಟಿ ಕ್ರಮವನ್ನು ಅನುಸರಿಸಿ ಈ ಕೀಟವನ್ನು ಪರಿಣಾಮವಾಗಿ ಹತೋಟಿ ಮಾಡಬೇಕೆಂದು ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿಯನ್ನು ಮಾಡಿದೆ.

ವಿಶೇಷ ಸೂಚನೆ

ಗದ್ದೆಯಲ್ಲಿ ನೀರಿದ್ದರೆ ಕ್ಲೋರೊಪೈರಿಫಾಸ್ + ಸೈಪರ್‍ಮೆತ್ರಿನ್ (ಆಮ್ಲಾ) ಎಂಬ ಕೀಟನಾಶಕವನ್ನು ಸಿಂಪರಣೆಯನ್ನು ಮಾಡಬೇಕು. ನೀರು ಇಲ್ಲದಿದ್ದರೆ ಮೇಲೆ ತಿಳಿಸಿದ ವಿಷ ಮಿಶ್ರಣ ತಯಾರಿಸಿ ಗದ್ದೆಗೆ ಎರಚಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕಾರ್ಯಕ್ರಮ ಸಂಯೋಜಕರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274.