ಕುಶಾಲನಗರ, ನ. 25: ಮಾದಾಪಟ್ಟಣದ ಶ್ರೀ ಜೋಡಿ ಕೊಲ್ಲಿ ಬಸವೇಶ್ವರ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎರಡು ದಿನಗಳ ಕೊಡಗು ಜಿಲ್ಲಾ ಆಟೋ ಚಾಲಕರು, ಮಾಲೀಕರಿಗೆ ಮತ್ತು ಸಾರ್ವಜನಿಕರ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಗಂಧದಕೋಟೆಯ ದೊಡ್ಡಮ್ಮತಾಯಿ ದೇವಾಲಯ ಆವರಣದಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್.ಭಾರತಿ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಲೀಲಾವತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಜೋಡಿ ಕೊಲ್ಲಿ ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಎಂ.ಜಿ.ರಾಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪುಷ್ಪ ನಾಗೇಶ್, ಪ್ರವೀಣ್, ಶಶಿಕುಮಾರ್, ಮುಳ್ಳುಸೋಗೆ ಗ್ರಾಮಪಂಚಾಯಿತಿ ಸದಸ್ಯ ಹರೀಶ್, ಡಿಎಸ್‍ಎಸ್ ತಾಲೂಕು ಅಧ್ಯಕ್ಷ ದಾಮೋದರ್, ಟ್ರಸ್ಟ್ ಕಾರ್ಯದರ್ಶಿ ಪುಟ್ಟಸ್ವಾಮಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಜಿಲ್ಲೆಯ ಆಟೋ ಚಾಲಕರು ಮಾಲೀಕರ 12 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಭಾನುವಾರ ಸಾರ್ವಜನಿಕ ತಂಡಗಳಿಗೆ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.