ಮಡಿಕೇರಿ, ನ. 27: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ 2016-17ನೇ ಸಾಲಿನ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರಪತಿ ಪ್ರಶಸ್ತಿ ವಿಜೇತ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ. ರಾಜೇಂದ್ರ ಪ್ರಸಾದ್ ಹಾಗೂ ಕೆಎಎಸ್ ಪದವಿ ಪಡೆದು ಉನ್ನತ ಹುದ್ದೆಯಲ್ಲಿರುವ ನಗರದ ಅಶೋಕಪುರ ನಿವಾಸಿ ಲಕ್ಷ್ಮೀ ಚಂದ್ರಶೇಖರ್ ಅವರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಡಿ. 10 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್. ಎಲ್. ದಿವಾಕರ್, ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಅಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಆಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ವಿ. ದೇವದಾಸ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಉದ್ಘಾಟಿಸಲಿ ದ್ದಾರೆ. ಮುಖ್ಯ ಭಾಷಣಕಾರರಾಗಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕರು ಹಾಗೂ ಪ್ರಬುದ್ದ ನೌಕರರ ಒಕ್ಕೂಟದ ಅಧ್ಯಕ್ಷ ಡಾ. ವಿ.ಎಸ್. ಸತೀಶ್, ಮಂಗಳೂರಿನ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಎಂ.ಆರ್. ರವಿ, ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಡಿಕೇರಿ ನಗರಸಭೆ ಆಯುಕ್ತೆ ಬಿ. ಶುಭ, ರಾಜರಾಜೇಶ್ವರಿ ದೇವಾಲಯದ ಧರ್ಮಾಧಿಕಾರಿ ಹೆಚ್.ಎಸ್. ಗೋವಿಂದ ಸ್ವಾಮಿ, ಗಾಳಿಬೀಡುವಿನ ಸಮಾಜ ಸೇವಕರು ಹಾಗೂ ದಾನಿಗಳಾದ ಟಿ.ಆರ್. ವಾಸುದೇವ್, ವ್ಯಾಂಡಮ್ ಎಂಟರ್‍ಪ್ರೈಸಸ್ ಮಾಲೀಕ ಕೆ.ಕೆ. ದಾಮೋದರ, ವೀರಾಜಪೇಟೆ ವಿಭಾಗೀಯ ದಸಂಸ ಸಂಚಾಲಕ ಎನ್. ವೀರಭದ್ರಯ್ಯ ಪಾಲ್ಗೊಳ್ಳುತ್ತಿರುವದಾಗಿ ದಿವಾಕರ್ ತಿಳಿಸಿದರು.

ಇತ್ತೀಚೆಗೆ ನಿಧನರಾದ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಡಾ. ವಾಸುದೇವ್ ಅವರ ಹೆಸರಿನಲ್ಲಿ ಪದವಿ ಮತ್ತು ಪಿಯುಸಿಯ ಸಾಧಕ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಯನ್ನು ನೀಡಲಾಗುವದೆಂದು ಅವರು ಹೇಳಿದರು. ದಲಿತ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದ್ದು, ಅರ್ಹರು ಹೆಚ್.ಎಲ್. ದಿವಾಕರ್, ಅಶೋಕಪುರ, ಮಡಿಕೇರಿ. ಈ ವಿಳಾಸಕ್ಕೆ ಕಳುಹಿಸಿಕೊಡ ಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಮೊ.ಸಂ : 94815 23648

ಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ಹೆಚ್.ಎ. ರವಿ, ತಾಲೂಕು ಸಂಘಟನಾ ಸಂಚಾಲಕ ಎ.ಪಿ. ದೀಪಕ್ ಹಾಗೂ ನಗರ ಸಂಘಟನಾ ಸಂಚಾಲಕ ಹೆಚ್.ಕೆ. ವಸಂತ ಉಪಸ್ಥಿತರಿದ್ದರು.