ಮಡಿಕೇರಿ, ನ.28 : ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವ ನ್ಯಾಷನಲ್ ಕೌನ್ಸಿಲ್‍ನ ನಿರಂತರ ಹೋರಾಟವನ್ನು ಅಧ್ಯಯನ ಮಾಡಿ ಬೇಡಿಕೆಗೆ ಬೆಂಬಲ ಸೂಚಿಸಿದ್ದು, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎನ್‍ಸಿ ಬೇಡಿಕೆಗಳ ಈಡೇರಿಕೆಗೆ ನೂರು ದಿನ, ನೂರು ವರ್ಷಗಳ ಹೋರಾಟವಾದರೂ ಅದನ್ನು ಕೈಬಿಡುವದಿಲ್ಲವೆಂದು ಸ್ಪಷ್ಟಪಡಿಸಿದರು. ಇಸ್ರೇಲ್‍ನ ಯಹೂದಿ ಜನಾಂಗ 2000 ವರ್ಷಗಳಿಂದ ತನ್ನ ಜನ್ಮ ಭೂಮಿಯನ್ನು ಮರಳಿ ಪಡೆಯಲು ಸಹನೆಯಿಂದ ಕಾಯಬೇಕಾಯಿತು. ಗೂರ್ಖಾ ಸಮುದಾಯದ ಹೋರಾಟ ಇಂದಿಗೂ ತಾರ್ಕಿಕ ಅಂತ್ಯವನ್ನು ಕಾಣದೆ ಮುಂದುವರಿಯುತ್ತಿದೆ ಎಂದು ಉಲ್ಲೇಖಿಸಿದರು.

ಕೊಡವಲ್ಯಾಂಡ್‍ಗೆ ಆದ್ಯತೆ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎನ್.ಯು. ನಾಚಪ್ಪ, ಕೊಡವ ಲ್ಯಾಂಡ್ ಬೇಡಿಕೆ ಸಿಎನ್‍ಸಿಯ ಮೊದಲ ಆದ್ಯತೆಯಾಗಿದ್ದು, ಜಾತಿ, ಜನಾಂಗ, ಧರ್ಮವನ್ನು ಮೀರಿ ಎಲ್ಲಾ ಸಮುದಾಯದವರ ಒತ್ತಾಸೆಯಿದ್ದರೆ ಕೇಂದ್ರಾಡಳಿತ ಪ್ರದೇಶದ ಬೇಡಿಕೆಗೆ ಒತ್ತಾಯಿಸಲಾಗುವದೆಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಟುಮಣಿಯಂಡ ಉಮೇಶ್, ಪುಲ್ಲೇರ ಕಾಳಪ್ಪ, ಚಂಬಂಡ ಜನತ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.