*ಸಿದ್ದಾಪುರ, ಜ. 21: ಇಲ್ಲಿಗೆ ಸಮೀಪದ ಪಳ್ಳಕೆರೆ ತೋಟದಲ್ಲಿ ಬೆಂಕಿ ಅವಘಡಕ್ಕೆ ಕಾರ್ಮಿಕನೋರ್ವನ ಮನೆ ಸಂಪೂರ್ಣ ನಾಶವಾದ ಘಟನೆ ನಡೆದಿದೆ. ಟಾಟಾ ಕಾಫಿ ಸಂಸ್ಥೆಗೆ ಸೇರಿದ ಪಳ್ಳಕೆರೆ ತೋಟದ ಲೈನ್ ಮನೆಯಲ್ಲಿ ವಾಸಮಾಡುತ್ತಿದ್ದ ಅಂಗಮುತ್ತು ಎಂಬವರ ಮನೆಯಲ್ಲಿ ನಿನ್ನೆ ತಡರಾತ್ರಿ 1 ಗಂಟೆಗೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ. ಶೌಚಾಲಯಕ್ಕೆ ಹೋಗಲೆಂದು ನೆರೆಯ ಮನೆಯವರು ಹೊರಗೆ ಬಂದಾಗ ಮನೆ ಉರಿಯುತ್ತಿದ್ದುದನ್ನು ಗಮನಿಸಿ ಕೂಡಲೇ ತೋಟದ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತೋಟದ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಯಾವದೇ ಪ್ರಯೋಜನವಾಗಲಿಲ್ಲ. ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅವಘಡ ನಡೆದ ಸಂದರ್ಭದಲ್ಲಿ ಅಂಗಮುತ್ತು ಕುಟುಂಬಸ್ಥರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಕಾರಣ ಘಟನೆಯಲ್ಲಿ ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ.