ಮಡಿಕೇರಿ, ಜ.22: ವಿಶ್ವ ಹಿಂದೂ ಪರಿಷತ್ ಮುಖಂಡರಾದ ತೊಗಾಡಿಯ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದು, ಈ ಬಗ್ಗೆ ಸಾಕ್ಷ್ಯಗಳ ಸಹಿತ ಬಹಿರಂಗ ಪಡಿಸಲಿ ಎಂದು ಪ್ರಗತಿಪರ ಚಿಂತಕರ ವೇದಿಕೆಯ ಸಂಚಾಲಕರಾದ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆದರಿಕೆ ಯಾರಿಂದ ಇದೆ ಎನ್ನುವದನ್ನು ತೊಗಾಡಿಯ ಅವರು ಆದಷ್ಟು ಬೇಗ ಬಹಿರಂಗಗೊಳಿಸಿದರೆ ಚಿಂತಕರಾದ ದಾಬೊಲ್ಕರ್ ಡಾ|| ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಇವರ ಹತ್ಯೆಯ ಕಾರಣಗಳು ಮತ್ತು ಹಂತಕರು ಯಾರು ಎನ್ನುವದು ಕೂಡ ತಿಳಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಪ್ರಗತಿಪರ ಚಿಂತಕರಾದ ನಾವುಗಳು ಸಂಘ ಪರಿವಾರದ ಸಂಘಟನಾ ಸಾಮಥ್ರ್ಯವನ್ನು ಯಾವತ್ತೋ ಮೆಚ್ಚಿಕೊಂಡಿದ್ದೇವೆ. ಪರಿವಾರ ಬೆಳೆದು ಬಂದ ದಾರಿಯಲ್ಲಿ ಬದ್ಧತೆ ಮತ್ತು ವ್ಯವಸ್ಥೆಗಳು ಅಚ್ಚುಕಟ್ಟಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಆಶ್ಚರ್ಯ ಮತ್ತು ಅಘಾತಕಾರಿ ಸುದ್ದಿ ವಿ.ಹೆಚ್.ಪಿ. ಮುಖಂಡ ತೊಗಾಡಿಯರವರು ಆಪತ್ತಿನಲ್ಲಿರುವದು ನಮಗಳಿಗೂ ದುಃಖ ತಂದಿದೆ. ವೈಚಾರಿಕವಾಗಿ ವಿಚಾರ ಭಿನ್ನಾಭಿಪ್ರಾಯಗಳಲ್ಲಿ ನಾವು ಉತ್ತರ ದಕ್ಷಿಣದವರೇ ಹೌದು. ತೊಗಾಡಿಯ ಆಪತ್ತಿನಲ್ಲಿದ್ದಾರೆ ಎಂಬುದನ್ನು ಈ ದೇಶ ಊಹಿಸಿಕೊಳ್ಳಲು ಕಷ್ಟವಾಗಿದೆ ಎಂದು ವಿಠಲ್ ನಂಜಪ್ಪ ತಿಳಿಸಿದ್ದಾರೆ.