ಮಡಿಕೇರಿ:ಜ.22 ದೇಶದಿಂದ ರಫ್ತಾಗುತ್ತಿರುವ ಕಾಫಿ ಬೆಳೆಯಲ್ಲಿ ಶೇಕಡಾ 90ರಷ್ಟು ಮಂಗಳೂರು ಬಂದರು ಮೂಲಕವೇ ನಡೆಯುತ್ತಿದ್ದು, ಕಡಿಮೆ ಸಾಗಾಟ ವೆಚ್ಚದ ಲಾಭ ಬೆಳೆಗಾರರಿಗೂ ಪರೋಕ್ಷವಾಗಿ ಲಭ್ಯವಾಗುತ್ತಿದೆ ಎಂದು ನವ ಮಂಗಳೂರು ಬಂದರು ಟ್ರಸ್ಟ್‍ನ ಅಧ್ಯಕ್ಷ ಸುರೇಶ್ ಶಿರ್ವಾರ್ಡ್‍ಕರ್ ಸಂತಸ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕಾಫಿ ಕ್ಯೂgರ್ಸ್ ಹಾಗೂ ಸಂಬಂಧಿತ ವಾಣಿಜ್ಯೋದ್ಯಮಿಗಳೊಂದಿಗೆ ಸಂವಾದ ಸಭೆಯಲ್ಲಿ ಶ್ರೀಯುತರು ಮಾತನಾಡಿ, ಇದೀಗ ರಾಜ್ಯದಲ್ಲಿ ಬೆಳೆಯುತ್ತಿರುವ ಕಿರು ಸೌತೆಕಾಯಿ ಕೂಡಾ ರಫ್ತಾಗುತ್ತಿದ್ದು, ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವಾಗಿದೆ ಎಂದರು. ಮಂಗಳೂರು ಬಂದರನ್ನು ಇನ್ನೂ 33 ಎಕರೆ ವಿಸ್ತರಿಸಲು ಯೋಜನೆ ಹಮ್ಮಿಕೊಂಡಿದ್ದು, ನೂತನ ತಂತ್ರಜ್ಞಾನವನ್ನು ಬಳಸಿ ಸರಕು ವಾಹನಗಳು ಯಾವದೇ ಅಡೆತಡೆ ಇಲ್ಲದೆ ಪ್ರವೇಶಾವಕಾಶ ಪಡೆಯಲು ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಫಿ ಕ್ಯೂರರ್ಸ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಮಾತನಾಡಿ ಅತ್ಯಂತ ಶುಚಿತ್ವ ಕಾಪಾಡಿ ಕೊಂಡು ಬರುತ್ತಿರುವ ಮಂಗಳೂರು ಬಂದÀರು ದೇಶದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ ಎಂದರು.

ಮಾಜಿ ಸಚಿವ ಹಾಗೂ ರಫ್ತುದಾರ ನಾಗರಾಜಶೆಟ್ಟಿ ಹಾಗೂ ಇತರರು ಅಭಿಪ್ರಾಯ ಹಂಚಿ ಕೊಂಡರು.

ಸ್ವಾಗತ ಭಾಷಣ ಮಾಡಿದ ಜಿಲ್ಲಾ ಚೇಂಬರ್ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್ ಅವರು ಈಗಿನ ಜಿಲ್ಲಾಧಿಕಾರಿಗಳು ‘ಸಂಸ್ಥೆಗಳ ಸಾಮೂಹಿಕ ಜವಾಬ್ದಾರಿ’ಯಡಿ ಕೊಡಗಿಗೂ ಆರ್ಥಿಕ ನೆರವು ನೀಡಲು ಪ್ರಸ್ತಾಪಿಸಿರುವದನ್ನು ಅಧ್ಯಕ್ಷರ ಗಮನಕ್ಕೆ ತಂದರಲ್ಲದೆ, ಈ ಬಗ್ಗೆ ಯೋಜನೆ ರೂಪಿಸಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಬೇಕೆಂದರು.

ಸಂಸ್ಥೆಯ ಹಿರಿಯ ಉಪ ಸಂಚಾರಿ ವ್ಯವಸ್ಥಾಪಕ ನವನೀತ್ ಕುಮಾರ್ ಅವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿವರಿಸುವದರೊಂದಿಗೆ ವಂದನಾರ್ಪಣೆ ಮಾಡಿದರು. ಸಹಾಯಕ ಸಂಚಾರಿ ವ್ಯವಸ್ಥಾಪಕ ಎಂ.ಸಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಬಂದರು ಅಧಿಕಾರಿ ಸುರೇಶ್ ಬಾಬು ಉಪಸ್ಥಿತರಿದ್ದರು.