ಶ್ರೀಮಂಗಲ, ಜ. 22: ಕೊಡಗು ಜಿಲ್ಲೆಯ ಮೇಲೆ ಕಾಳಜಿ ತೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣ ರಸ್ತೆಗಳ ಅಭಿವೃಧ್ದಿಗೆ ರೂ. 200 ಕೋಟಿ ಅನುದಾನ ನೀಡಿದ್ದಾರೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.

ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಹರಿಹರ ಗ್ರಾಮದಿಂದ ಲಕ್ಷಣ ತೀರ್ಥ ನದಿ ಮೂಲಕ ಕೋತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಮುಖ್ಯಮಂತ್ರಿಯವರ ವಿಶೇಷ ಪ್ಯಾಕೆಜ್ ಅನುದಾನದ ರೂ.18 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅವರು ಹಾಗೂ ಜಿ.ಪಂ. ಸದಸ್ಯ ಶಿವು ಮಾದಪ್ಪ ಅವರು ಜಂಟಿಯಾಗಿ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಶಿವು ಮಾದಪ್ಪ ಮಾತಾನಾಡಿ, ಗ್ರಾಮ ಅಭಿವೃದ್ಧಿ ಆಗಬೇಕಾದರೆ ಗ್ರಾಮಸ್ಥರು ತಮ್ಮಲ್ಲಿನ ಏನೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಬದಿಗೊತ್ತಿ ಒಂದಾಗಬೇಕು. ಗ್ರಾಮೀಣ ಮಟ್ಟದಲ್ಲಿ ಅಭಿವೃದ್ದಿ ಕಾರ್ಯ ಹಾಗೂ ಮೂಲ ಸೌಕರ್ಯದ ಸೌಲಭ್ಯ ಆಗಬೇಕಾಗಿದ್ದರೆ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಮಾತಾನಾಡಿ ಸರ್ಕಾರದ ಅನುದಾನದಲ್ಲಿ ಮಾಡುವ ಕಾಮಗಾರಿ ಗುಣಮಟ್ಟವನ್ನು ಕಾಯ್ದುಕೊಂಡಾಗ ಮಾತ್ರ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ ಈ ನಿಟ್ಟಿನಲ್ಲಿ ಸ್ಥಳಿಯ ಗ್ರಾಮಸ್ಥರು ಕಾಳಜಿ ವಹಿಸಬೇಕೇಂದು ಸಲಹೆ ನೀಡಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತಾನಾಡಿ, ಕಳೆದ 8-10 ವರ್ಷದಿಂದ ಅಭಿವೃದ್ಧಿ ಕಾಣದೆ ಹದಗೆಟ್ಟು ನೆನೆಗುದಿಗೆ ಬಿದ್ದಿರುವ ಹರಿಹರ ಲಕ್ಷಣತೀರ್ಥ ಕೋತೂರು ರಸ್ತೆಗೆ ಇದೀಗ ಅನುದಾನ ಬಿಡುಗಡೆಯಾಗುವ ಮೂಲಕ ಕಾಯಕಲ್ಪ ದೊರೆತಿದೆ. ಗ್ರಾಮ ಹಾಗೂ ನಾಡಿನ ಅಭಿವೃದ್ಧಿಯಾಗಲು ಗ್ರಾಮಸ್ಥರು ರಾಜಕೀಯದಲ್ಲಿ ಗುರುತಿಸಿಕೊಂಡಾಗ ಮಾತ್ರ ಅನುದಾನ ತರಲು ಸಾಧ್ಯ. ರಾಜಕೀಯದಲ್ಲಿರುವ ಕಾರ್ಯಕರ್ತ ರನ್ನು ತಮ್ಮ ಸ್ವಂತ ಲಾಭಕ್ಕಾಗಿ ರಾಜಕೀಯ ಪ್ರವೇಶಿಸಿದ್ದಾರೆ ಎನ್ನುವ ಆರೋಪ ಮಾಡುವದು ಸರಿಯಲ್ಲ. ರಾಜಕೀಯದಲ್ಲಿರುವ ಧುರೀಣರಿಂದ ಆಯಾ ಗ್ರಾಮದ, ವ್ಯಾಪ್ತಿಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಲಭ್ಯವಾಗಿದೆ ಎಂಬುದನ್ನು ಜನರು ಮನಗಾಣಬೇಕೆಂದು ಹೇಳಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಬಾನಂಡ ಪೃಥ್ಯು, ತಾ.ಪಂ ಸದಸ್ಯರಾದ ಪಲ್ವಿನ್ ಪೂಣಚ್ಚ, ಆಶಾ ಜೇಮ್ಸ್, ಗ್ರಾ.ಪಂ ಸದಸ್ಯ ಮುಕ್ಕಾಟಿರ ಸಂದೀಪ್ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊನ್ನಪ್ಪ, ಅಲ್ಪಸಂಖ್ಯಾತ ವಿಭಾಗದ ಬ್ಲಾಕ್ ಅಧ್ಯಕ್ಷ ಬಾಪು, ಪ್ರಧಾನ ಕಾರ್ಯದರ್ಶಿ ಕಾಡ್ಯಮಾಡ ಚೇತನ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ಅಧ್ಯಕ್ಷ ಸರ ಚಂಗಪ್ಪ, ಬ್ಲಾಕ್ ಕಾರ್ಯದರ್ಶಿ ಬಾಬು, ಹರಿಹರ ಕಾಂಗ್ರೆಸ್ ಬೂತ್ ಅಧ್ಯಕ್ಷ ಪೆಮ್ಮಣಮಾಡ ಮನು ತಮ್ಮಯ್ಯ, ಗೋಣಿಕೊಪ್ಪ ಕಾಂಗ್ರೆಸ್ ವಲಯ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ, ಕಾಂಗ್ರೆಸ್ ಮುಖಂಡರಾದ ಟಿಪ್ಪು ಬಿದ್ದಪ್ಪ, ಕಾಳಿಮಾಡ ಪ್ರಶಾಂತ್, ಅಪ್ಪಂಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ದಿನೇಶ್, ತೀತಿರ ಪ್ರಭು, ಗ್ರಾ.ಪಂ. ಸದಸ್ಯ ಚೊಟ್ಟೆಯಂಡಮಾಡ ಉದಯ, ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಮಾಣೀರ ಮಂಜು, ನಿವೃತ್ತ ಪ್ರಾಂಶುಪಾಲ ಬಾಚೀರ ಕಾಶಿ ಹಾಗೂ ಇತರರು ಹಾಜರಿದ್ದರು.