ಸುಂಟಿಕೊಪ್ಪ, ಜ.22: ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಕಾಂಡನಕೊಲ್ಲಿ ನಿವಾಸಿ ಬಿ.ಡಿ. ಹರಿಣಿ ಎಂಬವರ ದ್ವಿಚಕ್ರ ವಾಹನಕ್ಕೆ ರಾತ್ರಿ ವೇಳೆ ಶಂಕರ ಎಂಬಾತ ಬೆಂಕಿಹಚ್ಚಿದ ಪರಿಣಾಮ ದ್ವಿಚಕ್ರ ವಾಹನವು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಪಂಚಾಯಿತಿ ಸದಸ್ಯೆ ಹರಿಣಿ ಘಟನೆಯ ಕುರಿತು ಸುಂಟಿಕೊಪ್ಪ ಠಾಣೆಗೆ ದೂರು ನೀಡಿದ್ದಾರೆ.

ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಡನಕೊಲ್ಲಿ ಗ್ರಾಮದ ಚಾಮುಂಡೇಶ್ವರಿ ಕಾಲೋನಿ ನಿವಾಸಿ, ಕೆದಕಲ್ ಗ್ರಾ.ಪಂ.ಸದಸ್ಯೆ ಬಿ.ಡಿ. ಹರಿಣಿ ಅವರು ಭಾನುವಾರ ದಿನನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ ಸಂಜೆ ಸ್ಕೂಟಿ ಯಮಹ ಸಿಗ್ನಸ್ ರೇ (ಕೆಎ12-ಕ್ಯೂ7042) ವಾಹನವನ್ನು ಮನೆ ಪಕ್ಕದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ಮಧ್ಯರಾತ್ರಿ 11.30ರ ಸಮಯದಲ್ಲಿ ಸ್ಕೂಟರ್‍ಗೆ ಶಂಕರ ಎಂಬಾತ ಬೆಂಕಿ ಹಚ್ಚಿ ಓಡಿ ಹೋಗುವದನ್ನು ಕಂಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ನಿವಾಸಿಗಳ ಸಮಯ ಪ್ರಜ್ಞೆಯಿಂದ ಬೆಂಕಿಯ ಜ್ವಾಲೆಯನ್ನು ನಂದಿಸಿ ಸುತ್ತ ಮುತ್ತಲ ಮನೆಗಳಿಗೆ ಉಂಟಾಗಲಿದ್ದ ಭಾರೀ ಅನಾಹುತ ತಪ್ಪಿಸಿದ್ದಾರೆ.