ಕುಶಾಲನಗರ, ಫೆ. 10: ಕುಶಾಲನಗರದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಗೋದಾಮಿನಲ್ಲಿ ಅವಧಿ ಮೀರಿದ ಮಾನವ ಸೇವನೆಗೆ ಅರ್ಹವಲ್ಲದ ಅನುಪಯುಕ್ತ ಮದ್ಯವನ್ನು ನಾಶಗೊಳಿಸಲಾಯಿತು.

ಅಂದಾಜು ರೂ. 5 ಲಕ್ಷದ 90 ಸಾವಿರದ 266 ಮೌಲ್ಯದ ಒಟ್ಟು 414 ಪೆಟ್ಟಿಗೆ ಬಿಯರ್ ಅನ್ನು ಸೋಮವಾರಪೇಟೆ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಪಿ. ಸಂಪತ್‍ಕುಮಾರ್ ಅವರ ಸಮ್ಮುಖದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಾಶಗೊಳಿಸುವ ಕಾರ್ಯ ನಡೆಸಿದರು.

ಈ ಸಂದರ್ಭ ಡಿಪೋ ಅಬಕಾರಿ ನಿರೀಕ್ಷಕಿ ಆರ್.ಎಂ. ಚೈತ್ರಾ, ಸಿಬ್ಬಂದಿಗಳಾದ ಎ.ಪಿ. ವೀರೇಶ್ ಕುಮಾರ್, ಎಸ್.ಕೃಷ್ಣ, ಡಿಪೋ ವ್ಯವಸ್ಥಾಪಕ ವಿ.ಎಂ. ಕದಮ್ ಇದ್ದರು.