ಮಡಿಕೇರಿ, ಫೆ. 11: ಸದಾ ದಣಿವರಿಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕೊಡಗಿನ ಪತ್ರಕರ್ತರು, ತಮ್ಮ ಕುಟುಂಬ ಹಾಗೂ ಸಹೋದ್ಯೋಗಿ ಗಳೊಂದಿಗೆ ಸಂಭ್ರಮದಿಂದ ಕಳೆದರು. ಕೊಡಗು ಪ್ರೆಸ್‍ಕ್ಲಬ್‍ನ 19ನೇ ವಾರ್ಷಿಕೋತ್ಸವವು, ಪತ್ರಕರ್ತರ ಕುಟುಂಬಗಳ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಮನರಂಜನಾ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ, ಬೀಳ್ಕೊಡುಗೆ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಂಭ್ರಮ ನಡೆಯಿತು.

ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಮಾತನಾಡಿ, ಮಾಧ್ಯಮಗಳು ಸತ್ಯಕ್ಕೆ ಕನ್ನಡಿ ಹಿಡಿವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಹೇಳಿದರು.

ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಚಿ.ನಾ. ಸೋಮೇಶ್ ಮಾತನಾಡಿ, ನಾವೆಲ್ಲರೂ ಯಶಸ್ಸಿನ ಹಾದಿಯೆಡೆಗೆ ಸಾಗುವಾಗ ಎಡವಿದರೂ, ಇದನ್ನು ಬೇರೆಯವರು ಬೊಟ್ಟು ಮಾಡುತ್ತಾರೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕೆಂದು ಹೇಳಿದರು.

ಸಭಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರೆಸ್‍ಕ್ಲಬ್ ಮತ್ತು ಪÀತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಬದುಕಿನಲ್ಲಿ ಮೇಲೇರಿದವರ ಪರವಾಗಿ ಸುದ್ದಿ ಮಾಡುವದು ಸಾಮಾನ್ಯ. ಆದರೆ, ಧ್ವನಿಯೇ ಇಲ್ಲದವರಿಗೆ ಮಾಧ್ಯಮಗಳು ಧ್ವನಿಯಾದರೆ, ಅದು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.

ಬೀಳ್ಕೊಡುಗೆ: ಇದೇ ವೇಳೆ ಹಾಸನ ಜಿಲ್ಲೆಗೆ ವರ್ಗವಾಗಿರುವ ಟಿವಿ9 ವರದಿಗಾರ ಹಾಗೂ ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಸನ್ಮಾನ: ಪತ್ರಕರ್ತ ದಿವಂಗತ ಕೆ.ಬಿ. ಮಹಂತೇಶ್ ಸ್ಮರಣಾರ್ಥ ಪ್ರೆಸ್‍ಕ್ಲಬ್ ವತಿಯಿಂದ ನೀಡಲಾಗುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಯನ್ನು ‘ಶಕ್ತಿ’ ಯಲ್ಲಿ ಪ್ರಕಟಗೊಂಡ ವರದಿಗೆ ಬಿಟಿವಿ ವರದಿಗಾರ ಗೋಪಾಲ್ ಸೋಮಯ್ಯ ಅವರಿಗೆ ಪ್ರದಾನ ಮಾಡಲಾಯಿತು. ವಿವಿಧ ಸಂಘಸಂಸ್ಥೆಗಳಿಗೆ ಆಯ್ಕೆಯಾದ ಐತಿಚಂಡ ರಮೇಶ್ ಉತ್ತಪ್ಪ, ಅಜ್ಜಮಾಡ ಕುಶಾಲಪ್ಪ, ಬೊಳ್ಳಜಿರ ಅಯ್ಯಪ್ಪ, ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ, ಎಸ್.ಡಿ. ವಿಜೇತ್, ಬಿ.ಎ.ಭಾಸ್ಕರ್ ಹಾಗೂ ವಿಜಯ ಕುಮಾರ್ ಅವರನ್ನು ಸನ್ಮಾನಿಸಲಾಯ್ತು. ಡಾಕ್ಟರೇಟ್ ಪದವಿ ಪಡೆದ ಡಾ. ಉಳ್ಳಿಯಡ ಪೂವಯ್ಯ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಅಜ್ಜಮಾಡ ರಮೇಶ್ ಕುಟ್ಟಪ್ಪ, ವಲ್ರ್ಡ್ ಫೋಟೋಗ್ರಫಿ ಪ್ರಶಸ್ತಿ ಪುರಸ್ಕøತ ಜೀವನ್ ಪಾಲಕ್ಕಾಡ್, ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕøತರಾದ ಕಾಯಪಂಡ ಶಶಿ ಸೋಮಯ್ಯ ಹಾಗೂ ಎಂ.ಎನ್. ಚಂದ್ರಮೋಹನ್ ಸನ್ಮಾನಕ್ಕೆ ಭಾಜನರಾದರು.

ದಿನದ ಅಂಗವಾಗಿ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗೆ ಛದ್ಮವೇಷ, ಗಾಯನ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಳಾಂಗಣ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಮತ್ತು ವಿವಿಧ ಮನರಂಜನಾ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. - ಆನಂದ್ ಕೊಡಗು