ಮಡಿಕೇರಿ, ಫೆ. 19: ಮಡಿಕೇರಿ ನಗರದ ಭಾರತೀಯ ವಿದ್ಯಾಭವನದಲ್ಲಿ ಕಲಾಭಾರತಿ ಸಂಸ್ಥೆ ವತಿಯಿಂದ ಮಕ್ಕಳ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಬೆಂಗಳೂರಿನ ಪತ್ರಕರ್ತ ಮುರುಳಿಕೃಷ್ಣ ಬೆಳಾಲು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ಪ್ರದರ್ಶನದಲ್ಲಿ ನಗರದ 5 ವಿವಿಧ ಶಾಲೆಯ ಸುಮಾರು 250 ಮಂದಿ ಯುಕೆಜಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಕಲೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ತಾ. 23ರವರೆಗೆ ಪ್ರತಿ ದಿನ ಬೆಳಿಗ್ಗೆ 10.30 ರಿಂದ ರಾತ್ರಿ 7.30ರವರೆಗೆ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ ಎಂದು ಚಿತ್ರಕಲಾ ಶಿಕ್ಷಕ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಇದೇ ಸಂದರ್ಭ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಬೆಳಕು ಬೊಳ್ಳಮ್ಮ, ಆಯುಷ್ ಗಣಪತಿ, ಶಿಯಾ, ಸುಮುಖ್, ಪ್ರಣಮ್ ಆಚಾರ್ಯ, ಅಭಿನವ್, ಆಯುಷ್ ಶೆಟ್ಟಿ, ಪಿ.ಆರ್. ಆರ್ಯ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಭಾರತೀಯ ವಿದ್ಯಾಭವನದ ಶಿಕ್ಷಕಿ ಅನುಶ್ರೀ ಡಾ. ಜಯಲಕ್ಷ್ಮಿ ಪಾಟ್ಕರ್, ಭಾರತೀಯ ವಿದ್ಯಾಭವನದ ಯೋಗ ಶಿಕ್ಷಕ ಕೆ.ಕೆ. ಮಹೇಶ್‍ಕುಮಾರ್ ಹಾಗೂ ಇನ್ನಿತರರು ಇದ್ದರು.