ಸೋಮವಾರಪೇಟೆ, ಫೆ.20 : ಇಂಡೋನೇಷಿಯಾದ ಜಕಾರ್ತದಲ್ಲಿ ನಡೆದ 18ನೇ ಇನ್ವಿಟೇಷನ್ ಏಷಿಯನ್ ಗೇಮ್ಸ್ ಚಾಂಪಿಯನ್‍ಶಿಪ್‍ನ ರಿಲೇ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸೋಮವಾರಪೇಟೆಯ ಜೀವನ್ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.ಪಂಜಾಬ್‍ನ ಪಾಟಿಯಾಲದಲ್ಲಿರುವ ಇಂಡಿಯನ್ ನ್ಯಾಷನಲ್ ಕ್ಯಾಂಪ್‍ನಲ್ಲಿರುವ ಜೀವನ್ ಸೇರಿದಂತೆ ಇತರ ಮೂವರು ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 4/400ರಿಲೇ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರೊಂದಿಗೆ ಕೇರಳದ ಕುನ್ಹು ಮಹಮ್ಮದ್, ಜೀತು ಬೇಬಿ, ಉತ್ತರ ಪ್ರದೇಶದ ಸುಮಿತ್‍ಕುಮಾರ್ ತಂಡದಲ್ಲಿದ್ದು,

(ಮೊದಲ ಪುಟದಿಂದ) ಅಮೇರಿಕಾದ ತರಬೇತುದಾರ ಪಿ.ಬಿ. ಗಲೀನಾ ಅವರು ಈ ನಾಲ್ವರಿಗೆ ತರಬೇತಿ ನೀಡಿದ್ದಾರೆ.

ಚಾಂಪಿಯನ್ ಶಿಪ್ ಕ್ರೀಡಾಕೂಟದ ರಿಲೇ ವಿಭಾಗದಲ್ಲಿ ಚೈನೀಸ್ ಟೈ ಫೈ ತಂಡ ದ್ವಿತೀಯ ಹಾಗೂ ಶ್ರೀಲಂಕಾ ತಂಡ ತೃತೀಯ ಸ್ಥಾನ ಪಡೆದಿದೆ.

ಕರ್ನಾಟಕದಿಂದ ಏಕೈಕ ಕ್ರೀಡಾಪಟುವಾಗಿ ಪಾಲ್ಗೊಂಡಿದ್ದ ಜೀವನ್, ಸೋಮವಾರಪೇಟೆ ಸಮೀಪದ ಕಾರೇಕೊಪ್ಪ ಗ್ರಾಮದ ಕೆ.ಪಿ. ಸುರೇಶ್ ಮತ್ತು ಶಕುಂತಲಾ ದಂಪತಿ ಪುತ್ರನಾಗಿದ್ದು, ಪ್ರಸ್ತುತ ಬೆಂಗಳೂರಿನ ಕೇಂದ್ರ ಅಂಚೆ ಇಲಾಖೆ ನೌಕರರಾಗಿದ್ದಾರೆ.