ಮಡಿಕೇರಿ, ಫೆ. 21: ತಾಳತ್‍ಮನೆ ಬಳಿ ಸಾರಿಗೆ ಸಂಸ್ಥೆಯ ಬಸ್, ಸ್ವಿಫ್ಟ್ ಕಾರು ನಡುವೆ ದಿಕ್ಕಿ ಸಂಭವಿಸಿದ ಪ ಪರಿಣಾಮ ಕಾರಿನ ಹಿಂಬದಿ ಸೀಟ್‍ನಲ್ಲಿದ್ದ ವ್ಯಕ್ತಿಯೊಬ್ಬರ ಭುಜದ ಮೂಳೆ ಮುರಿದು ಗಾಯಗೊಂಡ ಘಟನೆ ನಿನ್ನೆ ನಡೆದಿದೆ.ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಪ್ರಸನ್ನ ಕುಮಾರ್ ಗಾಯಗೊಂಡ ವ್ಯಕ್ತಿಯಾಗಿದ್ದು, ಕಾರು ಚಾಲಕ ಸೋಮು ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಕುಶಾಲನಗರ- ಸಂಪಾಜೆ ಹೆದ್ದಾರಿಯಲ್ಲಿ ವಾಹನ ಸಂಚಾರದ ಸಮೀಕ್ಷೆ ನಡೆಸುವ ಕಾರ್ಯನಿಮಿತ್ತ ಲೋಕೋಪಯೋಗಿ ಸಹಾಯಕ ಅಭಿಯಂತರ ಪ್ರಸನ್ನ ಕುಮಾರ್, ಚಾಲಕ ಸೋಮು ಅವರು ತಮ್ಮ ಸ್ವಿಫ್ಟ್ ಕಾರಿನಲ್ಲಿ (ಕೆಎ 45 ಎಂ 2140) ಸಂಪಾಜೆ ಕಡೆ ತೆರಳುತ್ತಿದ್ದರು. ಈ ಸಂದರ್ಭ ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಪುತ್ತೂರು ವಿಭಾಗಕ್ಕೆ ಸೇರಿದ ಧರ್ಮಸ್ಥಳ ಘಟಕದ ಸಾರಿಗೆ ಸಂಸ್ಥೆಯ ಬಸ್ (ಕೆಎ 19 ಎಫ್ 3271) ಮಡಿಕೇರಿ ಮಂಗಳೂರು ಹೆದ್ದಾರಿಯ ತಾಳತ್‍ಮನೆ ಬಳಿಯ ತಿರುವಿನಲ್ಲಿ ಬೇರೊಂದು ವಾಹನ ಹಿಂದಿಕ್ಕುವ ಭರದಲ್ಲಿ ಎದುರು ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.