ಸಿದ್ದಾಪುರ, ಏ.1: ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಕಾರ್ಮಿಕ ಮಹಿಳೆಯೊಬ್ಬಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.

ಪಾಲಿಬೆಟ್ಟದ ಎಲೀಜ ತೋಟದಲ್ಲಿ ಕಾರ್ಮಿಕಳಾಗಿ ಕೆಲಸ ಮಾಡಿಕೊಂಡಿದ್ದ ಮೂಲತಃ ಅಸ್ಸಾಂ ರಾಜ್ಯದ ನಿವಾಸಿ ಸಾಹೀರಬಾನು ಮೃತ ದುರ್ದೈವಿ. ಕಳೆದ ಎರಡೂವರೆ ವರ್ಷಗಳಿಂದ ಪಾಲಿಬೆಟ್ಟದ ಎಲೀಜ ಕಾಪಿ üತೋಟದಲ್ಲಿ ತನ್ನ ಸಂಸಾರದೊಂದಿಗೆ ವಾಸಮಾಡಿಕೊಂಡಿದ್ದ ಸಾಹೀರಬಾನು ಭಾನುವಾರ ಸಂಜೆ ಸೌದೆ ತರಲೆಂದು ತೋಟಕ್ಕೆ ಹೋದ ಸಂದರ್ಭ ಕೆಳಗೆ ಬಿದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈಕೆ ಒಂದೂವರೆ ವರ್ಷ ಪ್ರಾಯದ ಪುಟ್ಟ ಮಗು ಹಾಗೂ ಪತಿಯನ್ನು ಅಗಲಿದ್ದಾಳೆ.

ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಇಲಾಖೆ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.