ಕುಶಾಲನಗರ, ಏ. 1: ಕುಶಾಲನಗರದ ಕೊಪ್ಪ ಗ್ರಾಮದ ಲಯನ್ ಹೆಲ್ಪಿಂಗ್ ಫೌಂಡೇಶನ್ ವತಿಯಿಂದ ಕೂಡಿಗೆ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಆಹಾರ ಸಾಮಗ್ರಿ, ಪಾತ್ರೆ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕೊಪ್ಪ ಬಳಿ ಮಾತೆ ಕಾವೇರಿ ವೃತ್ತದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವೃದ್ಧಾಶ್ರಮದ ವಾಸಿಗಳಿಗೆ ಹಣ್ಣುಹಂಪಲು, ಅಡುಗೆ ತಯಾರಿಸಲು ಪಾತ್ರೆ, ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೈಲುಕೊಪ್ಪ ಠಾಣಾಧಿಕಾರಿ ಪಿ. ಲೋಕೇಶ್, ಕುಶಾಲನಗರದ ಹಿರಿಯ ನಾಗರಿಕ ಜಿ.ಎಲ್. ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿದ್ದ ಆಶ್ರಮ ವಾಸಿಗಳಿಗೆ ಸಾಮಗ್ರಿಗಳನ್ನು ವಿತರಿಸಿದರು. ಜಿ.ಎಲ್. ನಾಗರಾಜ್ ಮಾತನಾಡಿ, ಕಿರಿಯರು ಹಿರಿಯರನ್ನು ಗೌರವದಿಂದ ಕಾಣಬೇಕಿದೆ. ವೃದ್ಧರನ್ನು ಯಾವದೇ ಸಂದರ್ಭದಲ್ಲಿ ಅಪಹಾಸ್ಯ ಮಾಡದೆ ಸಹಾಯ ಹಸ್ತ ಚಾಚಬೇಕಿದೆ ಎಂದರು. ಭಜರಂಗದಳ ಜಿಲ್ಲಾ ಸಹ ಸಂಚಾಲಕ ಅನೀಶ್, ಫೌಂಡೇಶನ್ ಪ್ರಮುಖರಾದ ಚಂದ್ರುಕುಮಾರ್, ಶ್ರೀನಿವಾಸ್, ಅಭಿಷೇಕ್, ಸುನಿಲ್, ಬ್ರಿಜೇಶ್, ಮಧು, ಸಂತೋಷ್ ಮತ್ತಿತರರು ಇದ್ದರು.